ಬೆಳಗಾವಿ: ಇಂದಿನ ವೇಗದ ಹಾಗೂ ಧಾವಂತದ ಜೀವನಶೈಲಿಯಲ್ಲಿ ಭೌತಿಕ ಸುಖದ ಬೆನ್ನು ಹತ್ತಿದ ಮನುಷ್ಯ ತನ್ನ ಜೀವನದ ನಿಜವಾದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಮನುಷ್ಯನ ಬದುಕಿನ ಸಾರ್ಥಕತೆಗಾಗಿ ಅಕ್ಕ ಮಹಾದೇವಿಯವರ ವಚನಗಳ ಅಧ್ಯಯನ ಮತ್ತು ಅನುಸಂಧಾನ ಅತ್ಯಂತ ಅಗತ್ಯವಾಗಿದೆ ಎಂದು ಪ್ರೇಮಕ್ಕ ಅಂಗಡಿ ಅಭಿಪ್ರಾಯಪಟ್ಟರು.
ಅವರು, ಕಾರಂಜಿಮಠದ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಲಾದ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಕ್ಕ ಮಹಾದೇವಿಯವರ ವಚನಗಳು ಆತ್ಮಜ್ಞಾನ, ವಸೆಳೆದು ಮತ್ತು ಶುದ್ಧ ಭಕ್ತಿಯ ಮಾರ್ಗವನ್ನು ತೋರಿಸುತ್ತವೆ. ಇವುಗಳನ್ನು ಅಳವಡಿಸಿಕೊಂಡರೆ ವ್ಯಕ್ತಿಯ ಜೀವನದಲ್ಲಿ ಶಾಂತಿ, ಸಮತೋಲನ ಮತ್ತು ಆಧ್ಯಾತ್ಮಿಕ ಅರಿವು ಬೆಳೆದು ಬರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ರತ್ನಪ್ರಭಾ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಭಕ್ತಿಪೂರ್ಣ ವಚನ ಪ್ರಾರ್ಥನೆ ಸಲ್ಲಿಸಿ ಸಭಿಕರ ಮನಗೆದ್ದರು.
ಕಾರ್ಯಕ್ರಮವನ್ನು ಎ.ಕೆ. ಪಾಟೀಲ ಅವರು ನಿರೂಪಿಸಿದರು. ವಿ.ಕೆ. ಪಾಟೀಲ ಅವರು ವಂದನಾ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.


