ಬಾಗಲಕೋಟೆ : ಎಪ್ರೀಲ್ ೦೬ (ಕರ್ನಾಟಕ ವಾರ್ತೆ) : ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಉಪ ಕಾರ್ಯದರ್ಶಿಗಳು ಬೈಕ್ ರ್ಯಾಲಿ ಮೂಲಕ ಸಂಚರಿಸಿ ಗಮನ ಸೆಳೆದರು.
ಜಿಲ್ಲಾ ಸ್ವೀಪ್ ಹಾಗೂ ಜಿಲ್ಲಾ ನೌಕರರ ಸಂಘದ ಸಹಯೋಗದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಬೈಕ್ ರ್ಯಾಲಿ ಮೂಲಕ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಚಾಲನೆ ನೀಡಿದರು. ನಂತರ ಬೈಕ್ನಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು.
ಬೈಕ್ ರ್ಯಾಲಿ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್ಐಸಿ ವೃತ್ತ, ಭಾರತೀಯ ಸ್ಟೇಟ್ ಬ್ಯಾಂಕ್, ಜಿಲ್ಲಾ ಆಸ್ಪತ್ರೆ, ಕಾಳಿದಾಸ ಸರ್ಕಲ್, ವಿದ್ಯಾಗಿರಿ ಸರ್ಕಲ್, ವಿದ್ಯಾಗಿರಿ ಮೂರನೇ ಕ್ರಾಸ್, ಅಯೋದ್ಯ ಹೋಟೆಲ್, ಮುಚಖಂಡಿ ಕ್ರಾಸ್, ಕೃಷ್ಣಾ ಟಾಕೀಜ್, ವಲ್ಲಭಾಯಿ ಚೌಕ್, ಬಸವೇಶ್ವರ ಸರ್ಕಲ್, ರೈಲ್ವೆ ಸ್ಟೇಷನ್, ರೋಟರಿ ಸರ್ಕಲ್ ಹಾಗೂ ಎಪಿಎಂಸಿ ಕ್ರಾಸ್ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ಅಲ್ಲಮಪ್ರಭು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಯೋಜನಾ ಸಹಾಯಕ ಭೀಮಪ್ಪ ತಳವಾರ, ಸಹಾಯಕ ನಿರ್ದೇಶಕ ಎಸ್.ಎಂ.ಕಾಂಬಳೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳಾದ ಎಂ.ಬಿ.ಬಳ್ಳಾರಿ, ಎಸ್.ವಿ.ಸತ್ಯರೆಡ್ಡಿ, ವಿಠಲ ವಾಲಿಕಾರ, ಗೋಪಾಲ ನೀಲನಾಯಕ, ಬಿ.ಸಿ.ಹೊಸಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.
ಬೈಕ್ ರ್ಯಾಲಿಯಲ್ಲಿ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ರ್ಯಾಲಿಯಲ್ಲಿ ಮತದಾನ ಜಾಗೃತಿಯ ಘೋಷಣಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಕೂಗಲಾಯಿತು. ನಿಮ್ಮ ಹಕ್ಕು, ನಿಮ್ಮ ಧ್ವನಿ ನಿಮ್ಮ ಕರ್ತವ್ಯ, ಆಶೆ ಆಮೀಷಗಳಿಗೆ ಒಳಗಾಗದೇ ಮತ ಚಲಾಯಿತಿ, ನಿಮ್ಮ ಮತ ನಿಮ್ಮ ಭವಿಷ್ಯ, ಓಟ್ ಮಾಡಿದವನೇ ಹೀರೋ, ನಿಮ್ಮ ನಡೆ ಮತಗಟ್ಟೆ ಕಡೆ ಘೋಷಣೆಗಳನ್ನು ಕೂಗಿದರು. ರ್ಯಾಲಿ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆಚರಣದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.


