—
ಕೊಪ್ಪಳ ಏಪ್ರೀಲ್ 04 (ಕ.ವಾ.): ನಾವು ನಮ್ಮ ಚಿಂತನಾ ಕ್ರಮವನ್ನು ಬದಲಾಯಿಸಿದಲ್ಲಿ, ನೆಲಕ್ಕೆ ಬಿದ್ದ ಕಕ್ಷಿದಾರರಿಗೆ ವಕೀಲರಿಂದ
ಶೀಘ್ರ ಮತ್ತು ನೈಜ ನ್ಯಾಯಾಧಾನ ಕೊಡಬಹುದಾಗಿದೆ ಎಂದು
ಕರ್ನಾಟಕ ಹೈಕೋರ್ಟನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಹಂಚಾಟೆ ಸಂಜೀವ್ಕುಮಾರ್ ಅವರು ಹೇಳಿದರು.
ಯಲಬುರ್ಗಾ ಪಟ್ಟಣದಲ್ಲಿ ಏಪ್ರೀಲ್ 04ರಂದು ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನಾ ಸಮಾರಂಭದ ಘನ ಉಪಸ್ಥಿತಿ ವಹಿಸಿ ಅವರು ಮಾತನಾಡಿದರು.
ನ್ಯಾಯ ನೀಡುವಾಗ ವಿಳಂಬಕ್ಕೆ ಅವಕಾಶವಿರಬಾರದು. ನಮ್ಮ ಈಗಿನ ಮನೋಭಾವ ಬದಲಾಗದ ಹೊರತು ಏನನ್ನೂ ಮಾಡಲಾಗದು. ಜನತೆಗೆ ನ್ಯಾಯ ಕೊಡುವಾಗ ನಾವು ಶೀಘ್ರ ಮತ್ತು ವೇಗದ ಕ್ರಮ ಅನುಸರಿಸಬೇಕು ಎಂದು ಸಲಹೆ ಮಾಡಿದರು.
ಈಗ ಇಡೀ ದೇಶದ ಜನತೆ ಹಾಗೂ ಸಮಾಜ ನ್ಯಾಯಾಂಗದತ್ತ ನೋಡುತ್ತಿದೆ. ನ್ಯಾಯಾಂಗವು ಭರವಸೆಯ ಬೆಳಕಾಗಿದೆ. ನ್ಯಾಯಾಲಯಗಳಿಗೆ ಹೋದರೆ ನಮಗೆ ನ್ಯಾಯ ಸಿಗುತ್ತದೆ ಎಂದು ಜನರು ನ್ಯಾಯಾಲಯದ ಮೇಲೆ ನಂಬಿಕೆ ಹೊಂದಿದ್ದಾರೆ.
ಮುಖ್ಯವಾಗಿ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಸರ್ಕಾರಗಳು ಇನ್ನು ಹೆಚ್ಚಿನ ಗಮನ ಕೊಡಬೇಕು ಎಂದರು.
ನಮ್ಮ ದೇಶದಲ್ಲಿ ನ್ಯಾಯಾಧೀಶರ ಸಂಖ್ಯೆ ಕಡಿಮೆ ಇದೆ. ಒಂದು ನ್ಯಾಯಾಲಯದ ವ್ಯವಸ್ಥೆಯಿಂದ
ಕನಿಷ್ಟ 5 ತಲೆಮಾರಿಗೆ ಸಹಾಯವಾಗಬೇಕು. ಒಂದು ನ್ಯಾಯಾಲಯದ ಕಾಲಾವಧಿ ಎಂದರೆ ಅದು ಕನಿಷ್ಟ 200 ದಿಂದ 300 ವರ್ಷ ಇರುತ್ತದೆ ಎಂದು ಎಲ್ಲರೂ ಅರ್ಥೈಸಿಕೊಳ್ಳಬೇಕು. ಈ ದಿಸೆಯಲ್ಲಿ ಈಗಿನ ನ್ಯಾಯಾಲಯಗಳ ಬಲಪಡಿಸುವ ಕಾರ್ಯ ಆಗಬೇಕು.
ರಾಜ್ಯದ ಕೆಲವು ನ್ಯಾಯಾಲಯಗಳಲ್ಲಿ ಅತ್ಯುತ್ತಮವಾದ ಮೂಲಭೂತ ಸೌಕರ್ಯಗಳಿವೆ. ಆದರೆ,
ಬಹುತೇಕ ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಗಳಿಗೆ ಕೊರತೆಯಿದೆ. ಇದರಿಂದಾಗಿ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದರು.
ಇದು ಹೊಸ ಯುಗ. ನಾವು ಬದಲಾಗಲೇಬೇಕು. ಜನಸಂಖ್ಯೆಗೆ ತಕ್ಕಂತೆ ನ್ಯಾಯಾಧೀಶರ ಸಂಖ್ಯೆ ಹೆಚ್ಚುವುದು ಅಗತ್ಯವಿದೆ ಎಂದರು. ಈ ದಿಶೆಯಲ್ಲಿ ಯೋಚಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಬಲಿಷ್ಟ ರಾಷ್ಟ್ರ ಕಟ್ಟಲು ನಾವೆಲ್ಲರೂ ಚಿಂತನಾಶೀಲರಾಗೋಣ ಎಂದರು.
ಮೂರು ವರ್ಷಗಳ ಹಿಂದೆ ಫೆಬ್ರವರಿ 23 ರಂದು ಈ ನ್ಯಾಯಾಲಯದ ಶಂಕುಸ್ಥಾಪನೆಗೆ ನಾನು ಸಾಕ್ಷಿಯಾಗಿದ್ದೆ. ಈಗ ಕಟ್ಟಡದ ಉದ್ಘಾಟನೆಯಾಗಿದೆ ಎಂದು ನ್ಯಾ.ಹಂಚಾಟೆ ಅವರು ಸಂತಷ ವ್ಯಕ್ತಪಡಿಸಿದರು.
ವಕೀಲರ ಭವನ ನಿರ್ಮಾಣಕ್ಕೆ ಸಲಹೆ:
ಯಲಬುರ್ಗಾದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿದ್ದು, ಜಿಲ್ಲಾ ನ್ಯಾಯಾಂಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದ ಹಂಚಾಟೆ ಅವರು, ಯಲಬುರ್ಗಾ ತಾಲೂಕಿನಲ್ಲಿ
ವಕೀಲರ ಭವನ ನಿರ್ಮಾಣ ಹಾಗೂ ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಬೇಕಿದೆ ಎಂದು ಶಾಸಕರಾದ ಬಸವರಾಜ ರಾಯರೆಡ್ಡಿ ಅವರಿಗೆ ಸಲಹೆ ಮಾಡಿದರು.
ಅನ್ನದಾತರಿಗೆ ಜಾಗೃತಿ ಮೂಡಿಸಿ: ತಮ್ಮ ಭಾಷಣದಲ್ಲಿ ರೈತರ ವಿಷಯ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಶಾಸಕರಾದ ಬಸವರಾಜ ರಾಯರೆಡ್ಡಿ ಅವರ ಜನಪರ, ರೈತಪರ ಕಾಳಜಿ ಮೆಚ್ವುವಂತದ್ದಾಗಿದೆ. ಅವರ ಕಾಳಜಿಯಿಂದಾಗಿ ಯಲಬುರ್ಗಾ ತಾಲೂಕು ವೇಗವಾಗಿ ಬೆಳೆಯುತ್ತಿದೆ. ಈ ಭಾಗದ ರೈತರ ಜೀವನ ಮಟ್ಟ ಸಂಪೂರ್ಣ ಸುಧಾರಿಸುವ ದಿಶೆಯಲ್ಲಿ ಅನ್ನದಾತರಿಗೆ ಕೃಷಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಲ್ಲಿನ ಮಣ್ಣು ಮತ್ತು ವಾತಾವರಣ ಉತ್ತಮವಾಗಿದೆ. ತೋಟಗಾರಿಕಾ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಆಹಾರ ಸಂಸ್ಕರಣ ಕೇಂದ್ರ ತೆರೆಯುವುದು ಸೇರಿದಂತೆ ರೈತರಿಗೆ ಹೊಸ ಹೊಸ ಕೌಶಲಗಳನ್ನು ಪರಿಚಯಿಸಬೇಕು ಎಂದು ನ್ಯಾ.ಹಂಚಾಟೆ ಅವರು ಸಲಹೆ ಮಾಡಿದರು.
ಶೀಘ್ರ, ನೈಜ ನ್ಯಾಯಾಧಾನ ಇಂದಿನ ಅತ್ಯಗತ್ಯ: ನ್ಯಾ.ಹಂಚಾಟೆ ಸಂಜೀವಕುಮಾರ ಸಲಹೆ


