ಬಳ್ಳಾರಿ, ಏ.04: ಇತ್ತೀಚೆಗೆ ಮಹಿಳಾ ಆರೋಗ್ಯ ಸುದ್ದಿಗಳು ರೋಗ ತಡೆಗಟ್ಟುವಿಕೆಯಲ್ಲಿ ಗಮನಾರ್ಹ ಪ್ರಗತಿಗಳ ಮೇಲೆ ಕೇಂದ್ರೀಕರಿಸುತ್ತಿವೆ. ಇದರಲ್ಲಿ ಎಂಡೊಮೆಟ್ರಿಯೋಸಿಸ್ ಆರಂಭಿಕ ಗುರುತಿಸುವಿಕೆಯ ಅಧ್ಯಯನಗಳು ಸೇರಿವೆ. ಪ್ರಮುಖ ಪ್ರವೃತ್ತಿಗಳು ಭಾರತದಲ್ಲಿ ಆರೋಗ್ಯ ಸೇವೆಯ ಪ್ರವೇಶವನ್ನು ಸುಧಾರಿಸುವುದು ಸೇರಿವೆ
ಎಂದು ಹೆಸರಾಂತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಬಿ.ಕೆ.ಅನುಪಮ ಸುಂದರ್ ಹೇಳಿದರು.
ಅವರು ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾಕೋಶ ಹಾಗೂ ಬಳ್ಳಾರಿಯ ಪ್ರಸೂತಿ ಸಮಾಜದ (ಎಫ್ ಒಜಿಎಸ್) ಆಶ್ರಯದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,
ಎಂಡೊಮೆಟ್ರಿಯೋಸಿಸ್ ಧೀರ್ಘಕಾಲದ, ಆಗಾಗ್ಗೆ ನೋವಿನಿಂದ ಕೂಡಿದ ಖಾಯಿಲೆಯಾಗಿದೆ. ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇ.10 ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇದು ತೀವ್ರ ಮುಟ್ಟಿನ ನೋವು, ಧೀರ್ಘಕಾಲದ ಶ್ರೇಣಿಯ ನೋವು, ಬಂಜೆತನ ಮತ್ತು ಆಯಾಸಕ್ಕೆ ಕಾರಣವಾಗಲಿದೆ. ಇದು ಆಗಾಗ್ಗೆ ಆತಂಕ, ಖಿನ್ನತೆ ಸೇರಿದಂತೆ ಜೀವನದ ಗುಣಮಟ್ಟಕ್ಕೆ ಗಮನಾರ್ಹ, ದೀರ್ಘಕಾಲೀನ ಅಡ್ಡಿಯನ್ನುಂಟು ಮಾಡಲಿದೆ. ಸಕಾಲಿಕ ತಡೆಗಟ್ಟುವಿಕೆಯ ಕ್ರಮಗಳನ್ನು ಅನುಸರಿಸುವುದರಿಂದ ಎದುರಾಗುವ ನಾನಾ ತೊಂದರೆಗಳಿಂದ ಮುಕ್ತರಾಗಬಹುದು ಎಂದರು.
ಇನ್ನೊಬ್ಬ ಪ್ರಸೂತಿ, ಸ್ತ್ರೀರೋಗ ತಜ್ಞ ವೈದ್ಯರಾದ ಡಾ.ಲಕ್ಷ್ಮೀ ಪಾವನ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಕೋಶದ ಸಂಯೋಜಕಿ ಡಾ.ಎಂ.ಎಸ್.ಶೋಭಾ ಸೇರಿದಂತೆ ಇತರರಿದ್ದರು.


