ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು ಆವರಣದಲ್ಲಿ ಏ.4ರಂದು 3 ಕೋಟಿ ರೂ ಮೌಲ್ಯದ ಶಿಷ್ಯವೇತನ ಯೋಜನೆ ಹೊಂದಿರುವ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಆವಾರ್ಡ್ ಸ್ಪರ್ಧಾ ಪರೀಕ್ಷೆ ಹಾಗೂ ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಘಂಟೆಯಿಂದ ನೋಂದಣಿ, ಮದ್ಯಾಹ್ನ 12 ಘಂಟೆಗೆ ಒಂದು ಘಂಟೆ ಕಾಲಾವಧಿಯ ಜೀನಿಯಸ್ ಸ್ಪರ್ಧಾ ಪರೀಕ್ಷೆ ನಡೆಯಲಿದೆ. ಈಗಾಗಲೇ ಹೆಸರು ನೋಂದಾಯಿಸಿಕೊಂಡವರು ನೇರವಾಗಿ ಪರೀಕ್ಷೆಗೆ ಹಾಜರಾಗಬಹುದು. ಹೆಸರು ನೋಂದಾಯಿಸಿಕೊಳ್ಳದಿರುವವರಿಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುವ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳಿದ್ದು ಎಸ್.ಎಸ್.ಎಲ್.ಸಿ, ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಪಠ್ಯಕ್ರಮದವರು ಪರೀಕ್ಷೆಗೆ ಹಾಜರಾಗಬಹುದಾಗಿದೆ.
ಮದ್ಯಾಹ್ನ 2-30 ಘಂಟೆಗೆ ಆಕ್ಸಫರ್ಡ ಜೀನಿಯಸ್ ಪ್ರಶಸ್ತಿ ಪ್ರದಾನ ಹಾಗೂ ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾಗಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ. ಮುದ್ನೂರು ಕಂಠಿಮಠದ ತಪೋಭಾಸ್ಕರ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸುವರು. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಉದ್ಘಾಟಿಸುವರು. ಸಂಸ್ಥೆಯ ಚೇರ್ಮನ್ ಎಂ.ಎಸ್.ಪಾಟೀಲ ಅಧ್ಯಕ್ಷತೆ ವಹಿಸುವರು. ಬಾಗಲಕೋಟ ಜಿಲ್ಲೆ ಇಳಕಲ್ಲನ ಶ್ರೀ ವಿಜಯಮಹಾಂತೇಶ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|ಎಸ್.ವಿ.ಬಿರಾದಾರ, ಬೆಂಗಳೂರಿನ ಎಂವಿಜೆ ಮೆಡಿಕಲ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರೀ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಡಾ|ಬಸವರಾಜ ಎಸ್.ಅಸ್ಕಿ ಮುಖ್ಯ ಅತಿಥಿಗಳಾಗ, ಬೆಂಗಳೂರಿನ ದೇವಿಕಾ ಸುಬ್ಬಾರಾವ್ ಫೌಂಡೇಶನ್ನಿನ ಅಧ್ಯಕ್ಷೆ ಪಲ್ಲವಿ ನಾಡಗೌಡ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಹೈದರಾಬಾದ್, ಕೋಲ್ಕತ್ತಾದ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಗಿರಿಧರ್ ಪೂಜಾರ ವಿಶೇಷ ಉಪನ್ಯಾಸ ನೀಡುವರು. ಸಂಸ್ಥೆಯ ಹಿತೈಷಿಗಳಾದ, ಶಿಕ್ಷಕ ಸಂಗಮೇಶ ಹೂಗಾರ, ನಿವೃತ್ತ ಪ್ರಾಂಶುಪಾಲ ನಾಗರಾಜ ಬಿರಾಜದಾರ ಉಪಸ್ಥಿತರಿರುವರು ಎಂದು ಸಂಸ್ಥೆಯ ಆಡಳಿತಾಧಿಕಾರಿಗಳಾದ ಅಮಿತಗೌಡ ಪಾಟೀಲ, ದರ್ಶನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


