ಬಳ್ಳಾರಿ. ಏ. 02::. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಒಡೆತನ ಯೋಜನೆ , ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಇದು ಪರಿಶಿಷ್ಟರ ಜೀವನಕ್ಕೆ ಅತ್ಯಂತ ಆಶಾದಾಯಕ ಯೋಜನೆ ಆಗಿರುತ್ತದೆ, ಆದರೆ ಈ ಯೋಜನೆಗೆ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ದರ ಸಮಿತಿ ರಚಿಸದೆ ಗರ ಬಡಿದಿದೆ ಶೀಘ್ರದಲ್ಲಿ ದರ ಸಮಿತಿಯನ್ನು ರಚಿಸಿ ಭೂ ಒಡೆತನ ಯೋಜನೆಯ ಫಲಾನುಭವಿಗಳಿಗೆ ಭೂಮಿಯನ್ನು ಹಂಚಿಕೆ ಮಾಡಬೇಕೆಂದು ಪ್ರಜಾ ಪರಿವರ್ತನಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಸಿ ಆನಂದ್ ಕುಮಾರ್ ಕುಡಿತಿನಿ ಆಗ್ರಹಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರುಗಳೊಂದಿಗೆ ಮತ್ತು ಫಲಾನುಭವಿಗಳೊಂದಿಗೆ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಜನ ಭೂ ರೈತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಡುಬಡವರು ಕಳೆದ ಎರಡು ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದಾರೆ, ಮತ್ತು ಹಲವಾರು ಸಲ ಜಿಲ್ಲಾಧಿಕಾರಿಗಳ ಕಚೇರಿಗೆ ಭೂಮಿಯನ್ನು ಹಂಚಿಕೆ ಮಾಡುವಂತೆ ಮನವಿ ಪತ್ರವನ್ನು ಸಹ ಸಲ್ಲಿಸಿ ಅಲೆದಾಡುತ್ತಿದ್ದಾರೆ ಆದರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಯೋಜನೆಯ ಫಲಾನುಭವಿಗಳನ್ನು ಮತ್ತು ಆಶಯವನ್ನು ಗಂಭೀರವಾಗಿ ಪರಿಗಣಿಸದೆ ಅಲೆಮಾರಿ ನಿಗಮದಲ್ಲಿ ಈ ಯೋಜನೆಯ ಅಡಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಹುರುಳಿಲ್ಲದ ದೂರನ್ನು ನೆಪವಾಗಿ ಇಟ್ಟುಕೊಂಡು ಎಲ್ಲಾ ನಿಗಮಗಳ ಭೂ ಹಂಚಿಕೆಯನ್ನು ತಡೆಹಿಡಿದಿದ್ದಾರೆ ಇದರಿಂದ ಆದಿ ಜಾಂಬವ ಬೋವಿ ನಿಗಮ ಬಂಜಾರ ನಿಗಮ ಸೇರಿದಂತೆ ಇತರೆ ಎಂಟು ನಿಗಮಗಳ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ, ಆಪಾದನೆ ಇರುವ ಅಲೆಮಾರಿ ನಿಗಮವನ್ನು ಹೊರತುಪಡಿಸಿಯಾದರು ಇತರ ನಿಗಮಗಳಿಂದ ಭೂಮಿಯನ್ನು ಹಂಚಿಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಅಲೆಮಾರಿ ನಿಗಮದಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಅರ್ಜಿಯನ್ನು ತನಿಖೆ ಮಾಡಲಾಗಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಿರುತ್ತಾರೆ ಆದರೂ ಸಹ ಈ ಯೋಜನೆ ಜಾರಿಗೆ ಜಿಲ್ಲಾಧಿಕಾರಿಗಳು ಮುಂದಾಗದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂ ರಹಿತರಿಗೆ ಅನ್ಯಾಯ ಎಸಿಗುತ್ತಿದ್ದಾರೆ ಎಂದು ಆರೋಪಿಸಿದ ಅನಂದ್ ಕುಮಾರ್, ಇನ್ನು ಮೂರು ದಿನಗಳಲ್ಲಿ ದರ ನಿಗದಿ ಸಮಿತಿಯನ್ನು ರಚಿಸದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಒಂಬತ್ತು ನಿಗಮಗಳ ಫಲಾನುಭವಿಗಳು ಮತ್ತು ಇತರರು ಅನಿರ್ದಿಷ್ಟ ಅವಧಿ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ವಕೀಲರಾದ ಬಿ ಈಶ್ವರ್ ನಾಯಕ್ ಮಾತನಾಡಿ, ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ವಿಫಲರಾಗಿದ್ದಾರೆ ಮತ್ತು ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂ ರೈತ ಬಡವರ ಮೇಲೆ ಅನುಕಂಪ ಇಲ್ಲ ಎಂಬುದನ್ನು ತಮ್ಮ ನಡೆಯಿಂದ ತೋರಿಸಿದ್ದಾರೆ, ಜಿಲ್ಲಾಧಿಕಾರಿಗಳ ಇಂತಹ ನಿರ್ಲಕ್ಷ್ಯ ಧೋರಣೆಯಿಂದ ಹೊರಬಂದು ತಕ್ಷಣ ದರ ನಿಗದಿ ಸಮಿತಿ ರಚಿಸಿ ಭೂಮಿಯನ್ನು ಮಂಜೂರು ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು. ಮತ್ತು ಈ ಯೋಜನೆಯಲ್ಲಿ ಅಕ್ರಮ ಎಸೆಗಿರುವ ಅಧಿಕಾರಿಗಳ ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ಭೂಮಿಯನ್ನು ಸಿಗುವಂತೆ ನೋಡಿಕೊಳ್ಳಬೇಕೆಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಾಲಾಜಿ ಜಯಶ್ರೀ ಜಯಲಕ್ಷ್ಮಿ ಮಾಂತೇಶ್ ದಿವಾಕರ್ ಬಾಬು ವೀರೇಶ್ ಗಾಳಿ ಕುಮಾರ್ ಸೇರಿದಂತೆ ಇತರರಿದ್ದರು.


