ಕಾಗವಾಡ: ದೇಶದ ಮಾಹಾನ ನಾಯಕರ ಜಯಂತಿಗಳನ್ನು ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ದೇಶಕ್ಕೆ ಅವರು ನೀಡಿರುವ ತ್ಯಾಗ, ಕೊಡುಗೆ, ಹಾಗೂ ಆದರ್ಶಗಳನ್ನು ತಿಳಿಸುವ ಅಗತ್ಯ ಇದ್ದು, ತಾಲೂಕಾಡಳಿತದ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತಹಶಿಲ್ದಾರ ರವೀಂದ್ರ ಹಾದಿಮನಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅವರು ಬುಧವಾರ ದಿ. 01 ರಂದು ಪಟ್ಟಣದ ಡಾ.ಅಂಬೇಡ್ಕರ್ ಸಭಾ ಭವನದಲ್ಲಿ ಡಾ. ಜಗಜೀವನರಾಮ ಹಾಗೂ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಜಯಂತಿಗಳ ಆಚರಣೆಯಲ್ಲಿ ತಾಲೂಕಿನ ಎಲ್ಲ ಮುಖಂಡರು, ಸಂಘಟನೆಗಳು, ಅಧಿಕಾರಿಗಳು ಸಹಕಾರದೊಂದಿಗೆ ಭಾಗವಹಿಸಿದಾಗ ಮಾತ್ರ ಜಯಂತಿಗಳು ಅರ್ಥಪೂರ್ಣವಾಗಲಿವೆ ಎಂದು ಹೇಳಿದರು.
ಇನ್ನೂ ಸಭೆಗೆ ನೀರಾವರಿ, ಅಬಕಾರಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಇರುವ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಅಧಿಕಾರಿಗಳು ಸಭೆಗೆ ಗೈರು ಆಗುತ್ತಾರೆ. ಇದು ಅವರಿಗೆ ಇರುವ ನಿಸ್ಸಕಾಳಜಿಯನ್ನು ತೋರಿಸುತ್ತದೆ. ಅಧಿಕಾರಿಗಳು ಬಾರದೆ ಇದ್ದರೆ ಸಭೆ ಯಾಕೆ ನಡೆಸುತ್ತಿರಿ ಎಂದು ಮುಖಂಡ ವಿವೇಕ ಕರ್ಪೆ ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಶಿಸ್ತು ಕ್ರಮ ಆಗಲೇ ಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾ.ಪಂ. ಇಒ ವೀರಣ್ಣ ವಾಲಿ, ಉಪತಶಿಲ್ದಾರ್ ರಶ್ಮಿ ಜಕಾತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಶುರಾಮ ಪತ್ತಾರ, ಐನಾಪುರ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಕಾಗವಾಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಪಿಎಸ್ಐ ರಾಘವೇಂದ್ರ ಖೋತ, ಮಲ್ಲಿಕಾರ್ಜುನ ಮಗದುಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಮುಖಂಡರಾದ ಸಂಜಯ ತಳವಲ್ಕರ, ಸಚೀನ ಪೂಜಾರಿ, ದೀಪಕ ಕಾಂಬಳೆ, ಜಯಪಲಾ ಬಡಿಗೇರ, ವಿದ್ಯಾಧರ ದೋಂಡರೆ, ಅಶೋಕ ಕಾಂಬಳೆ, ದಯಾನಂದ ಕೆರೂರೆ, ವಿವೇಕ ಕರ್ಪೆ, ವೆಂಕಟೇಶ್ ಕಾಂಬಳೆ, ವಿಜಯ ಅಸೂದೆ, ಹನುಮಂತ ಮದಾಳೆ ಸೇರಿದಂತೆ ಅನೇಕರು ಇದ್ದರು.


