ಬಾಗಲಕೋಟೆ, ಮಾರ್ಚ ೩೧ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಗೃಹಬಳಕೆ ಸಿಲೆಂಡರಗಳ ಸರಬರಾಜು ಸಮರ್ಪಕವಾಗಿ ಸಾಗುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಗ್ಯಾಸ ಏಜನ್ಸಿಗಳ ಮುಂದೆ ಜನಸಂದಣಿ ಸೇರುವಂತಹ ಸನ್ನಿವೇಶವನ್ನು ಗ್ಯಾಸ ಏಜನ್ಸಿಗಳು ಕೂಡ ಸೃಷ್ಠಿಸಬಾರದೆಂದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಂಗಣದಲ್ಲಿ ಮಂಗಳವಾರ ಸಂಜೆ ಐಓಸಿ, ಬಿಪಿಸಿ ಹಾಗೂ ಹೆಚ್ಪಿಸಿ ಕಂಪನಿಗಳ ಸೆಲ್ಸ್ ಆಫಿಸರ್ಸ, ಎಲ್ ಪಿ ಜಿ ಡೀಲರ್ಸ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಮಾತನಾಡಿದ ಅವರು, ಗೃಹಬಳಕೆಯ ಸಿಲೆಂಡರಗಳನ್ನು ನಗರ ಪ್ರದೇಶಗಳಲ್ಲಿ ೨೫ ದಿನಗಳ ನಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೪೫ ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಿರಲಾಗಿರುತ್ತದೆ ಇದರಂತೆಯೇ ಎಲ್ಲವೂ ನಡೆಯಬೇಕು ಅನಗತ್ಯ ಗೊಂದಲ ಸೃಷ್ಠಿಸಬಾರದು ಎಂದರು. ವಾಣಿಜ್ಯ ಬಳಕೆಯ ನೋಂದಾಯಿತ ಗ್ರಾಹಕರಿಗೆ ಅವರ ಬೇಡಿಕೆಗೆ ಅನುಸಾರ ಸರಬರಾಜು ಕಂಪನಿಗಳಿಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಿದಲ್ಲಿ ಬೇಡಿಕೆಗೆ ಅನುಸಾರ ಇಂಧನ ಬಿಡಗಡೆ ಮಾಡಲಾಗುವುದೆಂದು ತಿಳಿಸಿದರು.
ಜಿಲ್ಲಾಡಳಿತವು ಐಓಸಿ, ಬಿಪಿಸಿ ಹಾಗೂ ಹೆಚ್ಪಿಸಿ ಮೂರು ಕಂಪನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಬೇಡಿಕೆ ಅನುಸಾರವಾಗಿ ಈ ಮೂರು ಕಂಪನಿಗಳು ಪೂರೈಸಲು ಸಿದ್ದವಿರುತ್ತವೆ. ಪ್ರತಿದಿನ ಅಂದಾಜು ೯ ಸಾವಿರ ಸಿಲೆಂಡರ್ಗಳು ಪೂರೈಕೆಯಾಗುತ್ತಿದ್ದು, ಗೃಹಬಳಕೆಯ ಸಿಲೆಂಡರುಗಳಿಗೆ ಸಮಸ್ಯೆ ಇರುವದಿಲ್ಲ. ಅಧಿಕೃತ ನೊಂದಾಯಿತ ವಾಣಿಜ್ಯ ಕಂಜುಮರ್ಸ ಬೇಡಿಕೆ ಇಟ್ಟಲ್ಲಿ ಅಂತವರಿಗೆ ಮಾತ್ರ ಸಿಲೆಂಡರ್ ಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು, ಮಧ್ಯಾಹ್ನ ಬಿಸಿ ಊಟ, ಹಾಸ್ಟೇಲ್ ಹಾಗೂ ಇತರೆ ಸರಕಾರಿ ಯೋಜನೆಯಡಿ ಅನೀಲ ಸಂಪರ್ಕ ಹೊಂದಿದಂತಲ್ಲಿ ಆಧ್ಯತೆಯ ಮೇಲೆ ಪೂರೈಸಲಾಗುವುದು ಎಂದು ತಿಳಿಸಿದರು.
ಅನಧಿಕೃತವಾಗಿ ಎಲ್.ಪಿ.ಜಿ ಸಿಲೆಂಡರ್ ದಾಸ್ತಾನು ಮಾಡುವ ಮತ್ತು ರಿಫಲಿಂಗ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ. ಸಾರ್ವಜನಿಕರು ಸಿಲೇಂಡರ್ ರಶೀದಿ ಮೇಲೆ ಇರುವಂತಹ ಮೊತ್ತವನ್ನೇ ಪಾವತಿಸಬೇಕು. ರಶೀದಿ ಮೇಲಿರುವ ಮೊತ್ತಕಿಂತ ಹೆಚ್ಚಿನ ಮೊತ್ತವನ್ನು ಕೇಳಿ ಪಡೆಯುತ್ತಿದಲ್ಲಿ, ಐಓಸಿ ಕಂಪನಿಯ ಶ್ರೀನಿವಾಸ (೯೪೪೮೨೮೫೫೮೯), ಬಿಪಿಸಿ ಕಂಪನಿಯ ಸ್ಪಂದನ (೮೩೦೮೯೫೫೫೬೬), ಎಚ್ಪಿಸಿ ಕಂಪನಿಯ ವಸಂತ (೯೪೮೩೩೫೨೧೦೩೫), ಆರ್.ಬಿ.ಎಂಎಲ್ನ ಕೇದಾರ (೯೧೪೮೧೭೫೫೬೬), ನಯರಾ ಕಂಪನಿಯ ಅವಿನ ಲೋಬೋ (೬೩೬೦೩೭೦೭೬೦), ಎಂಆರ್ಪಿಸಿಎಲ್ನ ರವಿಚಂದ್ರ (೮೧೫೦೯೭೦೪೨೫), ಜಿಲ್ಲಾಧಿಕಾರಿಗಳ ಆಹಾರ ವಿಭಾಗ (೦೮೩೫೪-೨೩೫೦೯೪), ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ (೧೧೨)ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಜಿಲ್ಲೆಯಲ್ಲಿ ಇಂಧನದ ಅಬಾವ ಇರುವದಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ೪೭೮೫೯೬ ಗೃಹ ಬಳಕೆಯ ಸಿಲೆಂಡರ ಕನೆಕ್ಷನ್ಗಳಿದ್ದು, ಗ್ರಾಹಕರು ಮಿತವಾಗಿ ಬಳಕೆ ಮಾಡಲು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರರು ಇದ್ದರು.
ಗೃಹಬಳಕೆ ಸಿಲೆಂಡರ್ಗಳ ಸಮರ್ಪಕ ಸರಬರಾಜು : ಡಿಸಿ ಸಂಗಪ್ಪ


