ರಂಗಸೃಷ್ಟಿಯ ರಂಗಸಮ್ಮಾನಕ್ಕೆ ನಿರ್ಮಲಾ ಪ್ರಕಾಶ್ ಆಯ್ಕೆ

MK HasiruKranti
ರಂಗಸೃಷ್ಟಿಯ ರಂಗಸಮ್ಮಾನಕ್ಕೆ ನಿರ್ಮಲಾ ಪ್ರಕಾಶ್ ಆಯ್ಕೆ
WhatsApp Group Join Now
Telegram Group Join Now
ಬೆಳಗಾವಿ :  ಬೆಳಗಾವಿಯ ರಂಗ ಸೃಷ್ಟಿ ಸಾಂಸ್ಕೃತಿಕ ಸಂಘ (ರಿ) ಕೊಡ ಮಾಡುವ 2025 ನೇ ಸಾಲಿನ ರಂಗಸಮ್ಮಾನ ಪ್ರಶಸ್ತಿಗೆ ಹಿರಿಯ ನಟಿ, ಗಾಯಕಿ ಹಾಗೂ ಸಪ್ತಸ್ವರ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ನಿರ್ಮಲ ಪ್ರಕಾಶ್ ಅವರು ಭಾಜನರಾಗಿದ್ದಾರೆ.
ರಂಗ ಸೃಷ್ಟಿ ತಂಡವು ಪ್ರತಿ ವರ್ಷ ವಿಶ್ವರಂಗ ಭೂಮಿ ದಿನಾಚರಣೆಯ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಸಾಧನೆ ಮಾಡಿದ ಓರ್ವ ರಂಗಕರ್ಮಿಗೆ ಈ ಗೌರವವನ್ನು ಇತ್ತು ಸನ್ಮಾನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ರಂಗಸಮಾನವನ್ನು ರಂಗಭೂಮಿಯಲ್ಲಿ ಸಾಧನೆಗೈದ  ರಂಗಕರ್ಮಿಗಳಿಗೆ ನೀಡಲಾಗುತ್ತಿದೆ.
ಈ ವರ್ಷದ ರಂಗಸಮ್ಮಾನಕ್ಕೆ ಪಾತ್ರರಾದ ನಿರ್ಮಲಾ ಪ್ರಕಾಶ್ ಅವರು ಕಳೆದ 30 ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಪ್ರಭುದ್ಧ ಅಭಿನಯದಿಂದ  ಹಲವಾರು ನಾಟಕಗಳಲ್ಲಿ ವಿಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬಿದ್ದರು. ಅವರು ಅಭಿನಯಿಸಿದ ಶಿರೀಷ ಜೋಶಿ ಅವರ ‘ಮಿಂಚು’ ನಾಟಕದಲ್ಲಿನ ಉದ್ದವನ ಪಾತ್ರ ಅವರಿಗೆ ಅಪಾರ ಜನಪ್ರಿಯತೆಯನ್ನು ಒದಗಿಸಿತ್ತು. ಅದಾದ ನಂತರ ಅವರು ಜಯತೀರ್ಥ ಜೋಶಿ ಅವರ ನಿರ್ದೇಶನದಲ್ಲಿ ಮೂಡಿಬಂದ ಗಿರೀಶ್ ಕಾರ್ನಾಡ್ ಅವರು ರಚಿಸಿದ ‘ವಾಸಾಂಸಿ ಜೀರ್ಣಾನಿ’ ನಾಟಕದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಂಗತಂಡಗಳಲ್ಲಿ ಸಹ ಅವರು ಕಾರ್ಯನಿರ್ವಹಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಂಗೀತ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಬೆಳಗಾವಿಯ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ತಮ್ಮ ಸಪ್ತಸ್ವರ ಸಂಗೀತ ವಿದ್ಯಾಲಯದ ಮೂಲಕ ನೀಡುತ್ತಿದ್ದಾರೆ. ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಪ್ರಕಾರಗಳಲ್ಲಿ ಹಾಡುವ  ಕ್ಷಮತೆಯನ್ನು ಅವರು ಹೊಂದಿದ್ದಾರೆ. ನಾಡಿನ ಹಲವೆಡೆಗಳಲ್ಲಿ ಅವರು ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದ್ದಾರೆ.
ಈ ವರ್ಷದ ಪ್ರಶಸ್ತಿಗಾಗಿ ರಂಗ ಸೃಷ್ಟಿಯು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು. ಸಭೆಯಲ್ಲಿ ರಂಗ ಸೃಷ್ಟಿಯ ಅಧ್ಯಕ್ಷರಾದ ರಮೇಶ್ ಜಂಗಲ್, ಉಪಾಧ್ಯಕ್ಷರುಗಳಾದ ಎಂ. ಕೆ. ಹೆಗಡೆ ಹಾಗೂ ಶೈಲಜಾ ಭಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ್, ಕೋಶಾಧಿಕಾರಿ ಶಾಂತಾ ಆಚಾರ್ಯ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾದ ಡಾ. ರಾಮಕೃಷ್ಣ ಮರಾಠೆ, ಶಿರೀಷ ಜೋಶಿ, ಸುನೀತಾ ಸುರೇಶ್, ರಮೇಶ್ ಮಿರ್ಜಿ, ಶರಣಯ್ಯ ಮಠಪತಿ, ಕಲಾವಿದರಾದ ವಿಶ್ವನಾಥ ದೇಸಾಯಿ, ವಾಮನ ಮಳಗಿ, ಶಾಂತಾ ಜಂಗಲ್ ಮುಂತಾದವರು ಉಪಸ್ಥಿತರಿದ್ದರು.
ರಂಗಸೃಷ್ಟಿ ಆಯೋಜಿಸಲಿರುವ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ  ನಿರ್ಮಲ ಪ್ರಕಾಶ್ ಅವರಿಗೆ ರಂಗ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
WhatsApp Group Join Now
Telegram Group Join Now
Share This Article