ಮೋಕಾ: ಮಾ. 30 : ಎನ್ಎಸ್ಎಸ್ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮತ್ತು ಜೀವನ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಕತೆಗಾರ ಭುವನೇಶ್ ಮೋಕಾ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೋಕಾದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಶಕ್ತಿಯೇ ದೇಶದ ಶಕ್ತಿಯಾಗಿದೆ. ಯಾವುದೇ ದೇಶದ ಪ್ರಗತಿಯು ಆ ದೇಶದ ಯುವತಲೆಮಾರಿನ ಶಿಕ್ಷಣ, ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೇಲಿದೆ.ಯುವ ಜನತೆ ಪ್ರಾಮಾಣಿಕತೆ ಮೈಗೂಡಿಸಿಕೊಂಡು ಮಾಡುವ ಕಾರ್ಯಗಳಲ್ಲಿ ಶ್ರದ್ಧೆ ಹೊಂದಬೇಕು. ನಿರ್ಮಲ ಮನಸ್ಸು ಹೊಂದಿದವರ ಆತ್ಮದಲ್ಲಿ ಸತ್ಯದ ಜ್ಯೋತಿ ಬೆಳಗುತ್ತದೆ.ತಮ್ಮ ಪರಿವರ್ತನೆ ಕತೆಯನ್ನು ವಿವರಿಸಿ ಸೇವಾ ಮನೋಭಾವನೆಯಿಂದ ಬದುಕಿನ ಸಾರ್ಥಕತೆಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಜಿ. ಕಲಾವತಿ ಅವರು ಮಾತನಾಡುತ್ತಾ ಎನ್.ಎಸ್. ಎಸ್. ಸ್ವಯಂಸೇವಕರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಇದು ಕೇವಲ ಒಂದು ಪಠ್ಯೇತರ ಚಟುವಟಿಕೆಯಲ್ಲ, ಬದಲಾಗಿ ನಿಜ ವ್ಯಕ್ತಿತ್ವವನ್ನು ರೂಪಿಸುವ, ಸಮಾಜ ವನ್ನು ಅರ್ಥೈಸುವ ಮತ್ತು ರಾಷ್ಟ್ರವನ್ನು ಬಲಪಡಿಸುವ ಒಂದು ಶಕ್ತಿಶಾಲಿ ಯೋಜನೆಯಾಗಿದೆ ಎಂದರು.
ವೇದಿಕೆಯ ಮೇಲೆ ಉಪನ್ಯಾಸಕರಾದ ಎ.ಎಂ.ಪಿ ಪ್ರವೀಣ್ , ಸಣ್ಣ ವೀರೇಶ್ ಮತ್ತುಇತರ ಉಪನ್ಯಾಸಕರು ಹಾಜರಿದ್ದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಎಂ.ಬಸವರಾಜ್ ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನಿ ಶೇಖಮ್ಮ ನಿರೂಪಿಸಿ ವಂದಿಸಿದರು.


