ಬಳ್ಳಾರಿ,ಮಾ,31. : ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ಬಳ್ಳಾರಿ ನಗರದ ಬಂಡಿಹಟ್ಟಿಯ ರಾಮನಗರದಲ್ಲಿರುವ ಗಿರಿಜಪ್ಪ ಅವಧೂತರ ಮಠದಲ್ಲಿ ಜಾನಪದ ಕಲಾ ವೈಭವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತತ್ವಪದ, ರಂಗಗೀತೆ ಹಾಗೂ ಜಾನಪದ ಸಂಗೀತ ಸಂಭ್ರಮ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಕೊರ್ಲಗುಂದಿ ಬಸವನಗೌಡ ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿಯೂ ಜನಪದ ತತ್ವಪದಗಳು ಜನಮನ್ನಣೆ ಗಳಿಸಿರುವುದಕ್ಕೆ ಅವುಗಳಲ್ಲಿರುವ ಗಟ್ಟಿಯಾದ ಸಾಹಿತ್ಯವೇ ಕಾರಣ ಎಂದು ಹೇಳಿದರು. ತತ್ವಪದಗಳಲ್ಲಿ ಮನುಷ್ಯನ ಬದುಕಿನ ಸಾರ, ಮೋಕ್ಷ ಮಾರ್ಗ, ದುಡಿಮೆ, ಧರ್ಮ ಹಾಗೂ ಗುರು-ಶಿಷ್ಯ ಪರಂಪರೆಯ ಮೌಲ್ಯಗಳನ್ನು ಕಾಣಬಹುದು. ಈ ಕಾರಣದಿಂದ ಜನಪದ ತತ್ವಪದಗಳು ಶಾಶ್ವತವಾಗಿ ಬದುಕಿನ ಸತ್ಯವನ್ನು ಸಾರುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ ಅವರು ಮಾತನಾಡಿ, ಶರೀಫರ ತತ್ವಪದಗಳು ಜಾತಿ-ಧರ್ಮಗಳನ್ನು ಮೀರಿ ಭಾವೈಕ್ಯತೆಯನ್ನು ಬಿಂಬಿಸುತ್ತವೆ. ನಮ್ಮ ಮಣ್ಣಿನ ಜನಪದ ಹಾಗೂ ತತ್ವಪದಗಳಲ್ಲಿ ಅಪಾರ ಶಕ್ತಿ ಅಡಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ಚೆಡು ತಿಪ್ಪೇಸ್ವಾಮಿ, ಯುವ ಉದ್ಯಮಿ ವೈ ಮಾರುತಿ (ಸಿರುಗುಪ್ಪ), ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲೆ ಟ್ರಸ್ಟ್ ಉಪಾಧ್ಯಕ್ಷೆ ಜಯಲಕ್ಷ್ಮಿ, ಸುಬ್ರಮಣ್ಯಂ (ಸಿರುಗುಪ್ಪ) ಹಾಗೂ ಬೈಲಾಟ ಹಿರಿಯ ಕಲಾವಿದ ಹನುಮವಧೂತ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಸೇರಿದಂತೆ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.
ನಂತರ ಜಡೇಶ್ (ಎಮ್ಮಿಗನೂರು) ಅವರಿಂದ ಜಾನಪದ ಸಂಗೀತ, ಕೆ. ರಮೇಶ್ ತಂಡದಿಂದ ತತ್ವಪದ ಗಾಯನ ಹಾಗೂ ಹನುಮವಧೂತ ತಂಡದಿಂದ ರಂಗಗೀತೆ ಕಾರ್ಯಕ್ರಮಗಳು ಜರುಗಿ, ನೆರೆದ ಪ್ರೇಕ್ಷಕರಿಗೆ ಮನರಂಜನೆ ನೀಡಿದವು.


