ಹುನಗುಂದ; ಎನ್ಎಸ್ಎಸ್ ಯುವಕರನ್ನು ಸಮಾಜ ಸೇವೆಯತ್ತ ಕರೆದೊಯ್ಯುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ವಿ. ಮ.ವಿ.ವ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣಸಿ. ಚರಂತಿಮಠ ಹೇಳಿದರು.
ತಾಲೂಕಿನ ಐಹೊಳೆ ಗ್ರಾಮದಲ್ಲಿ ಹುನಗುಂದದ ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ. ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್. ಎಸ್. ಘಟಕದ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಸೇವಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನಮ್ಮ ದೇಶದ ಯುವಕರು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಬದಲಾವಣೆ ತರಲು ಸಾಧ್ಯ. ಶಿಬಿರದ ಏಳು ದಿನಗಳವರೆಗೆ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಆತ್ಮನಿರ್ಬರ ಭಾರತದ ಜಾಗೃತಿ ಮುಂತಾದ ಅಭಿಯಾನಗಳನ್ನು ಆಯೋಜಿಸಿ ಜನರಲ್ಲಿ ದೇಶದ ಪ್ರಗತಿಯ ಅರಿವನ್ನು ಮೂಡಿಸಿದ್ದಾರೆ ಎಂದರು.
ವಿ.ಮ.ವಿ.ವ. ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ಜ್ಞಾನ ಪಡೆದರೆ ಸಾಲದು, ಪಡೆದ ಜ್ಞಾನ ಸಮಾಜಕ್ಕೆ ಸ್ಪಂದಿಸುವಂತಿರಬೇಕು. ದೇಶವನ್ನು ಕಟ್ಟಲು ಬೇಕಾದ ಅರಿವನ್ನು ಈ ಎನ್.ಎಸ್.ಎಸ್ ಕಲಿಸುತ್ತದೆ.
ಕಾಳಿದಾಸ ಸಹಕಾರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಸಿ.ಆಂಟರತಾನಿ ಯುವಶಕ್ತಿ ರಾಷ್ಟ್ರದ ಶಕ್ತಿ ಎಂಬುದನ್ನು ತಾವು ಮಾಡುವ ಕೆಲಸ ಕಾರ್ಯಗಳಿಂದ ಎನ್.ಎಸ್.ಎಸ್. ಶಿಬಿರಾರ್ಥಿಗಳು ನಮ್ಮ ಗ್ರಾಮದ ಜನರಲ್ಲಿ ಅರಿವನ್ನುಂಟು ಮಾಡಿದ್ದಾರೆ ಎಂದರು. ಸಂಘದ ಹಿರಿಯ ನಿರ್ದೇಶಕ ಬಿ.ಎಸ್.ಕೆಂದೂರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಾಯ್.ಕೆ.ವಾಲಿಕಾರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಎಸ್.ಆರ್. ನಾಗಣ್ಣವರ ಉಪಸ್ಥಿತರಿದ್ದರು.


