ರಾಯಬಾಗ: ಮಠಗಳ ಮತ್ತು ಸಂತರಿಂದ ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಇನ್ನುವರೆಗೂ ಉಳಿದುಕೊಂಡಿದೆ ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮಿಜೀ ಹೇಳಿದರು.
ಭಾನುವಾರ ರಾತ್ರಿ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ 39ನೇ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಜ್ಞಾನ ಜೊತೆಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ದೇಶ ಪ್ರೇಮವನ್ನು ಬೆಳೆಸಬೇಕು ಎಂದರು.
ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ ಮಾತನಾಡಿ, ಭಾರತೀಯರಾದ ನಾವೆಲ್ಲರೂ ಹಿಂದೂ, ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಮಾತ್ರ ಸನಾತನ ಹಿಂದೂ ಧರ್ಮ ಉಳಿಯಲು ಸಾಧ್ಯ. ನಮ್ಮ ಮಕ್ಕಳಲ್ಲಿ ನಮ್ಮ ಧರ್ಮ, ಪರಂಪರೆ, ಇತಿಹಾಸದ ಬಗ್ಗೆ ಜಾಗೃತ ಮೂಡಿಸಬೇಕಾಗಿದೆ ಎಂದರು.
ಚಿಕ್ಕೋಡಿ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ, ಅಥಣಿ ಕಾಡಸಿದ್ಧೇಶ್ವರ ಮಠದ ಡಾ.ಕಾಡಯ್ಯ ಸ್ವಾಮೀಜಿ ಮಾತನಾಡಿದರು.
ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಜೀಯವರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜೈನಾಪುರದ ಸಿದ್ದಲಿಂಗ ಸ್ವಾಮಿಜೀ, ವಿಜಯಪುರದ ಶಂಕರ ಸ್ವಾಮಿಜೀ, ನರಸಿಂಹರಾಜ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ ವಿಠ್ಠಲಜಿ ಮಾಳಿ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ರಘು ಮಾಳಿ, ಅಮಿತ ಜಾಧವ, ಸಂಗಣ್ಣ ದತ್ತವಾಡೆ, ಕೇದಾರಿ ಮಾಳಿ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.


