ಬಳ್ಳಾರಿ. ಮಾ. 28: : ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ), ಬಳ್ಳಾರಿ ವತಿಯಿಂದ ಖ್ಯಾತ ತೊಗಲುಗೊಂಬೆ ಕಲಾವಿದರಾದ ದಿವಂಗತ ಶ್ರೀ ಹುಲೆಪ್ಪನವರ ಸ್ಮರಣಾರ್ಥ ರಾಜ್ಯ ಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 29ರಂದು ಸಂಜೆ 6 ಗಂಟೆಗೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ತಂಡದ ಅಧ್ಯಕ್ಷರಾದ ಕೆ. ಹೊನ್ನೂರಸ್ವಾಮಿ ತಿಳಿಸಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತೊಗಲುಗೊಂಬೆ ಸೇರಿದಂತೆ ಜನಪದ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 27 ಜನರಿಗೆ ರಾಜ್ಯ ಮಟ್ಟದ “ಹುಲಿಕುಂಟೆ ಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.
ಸಂಡೂರಿನ ವಿರಕ್ತ ಮಠದ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಮಧುಸೂಧನ ಕಾರಿಗನೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜೆ.ಟಿ. ಫೌಂಡೇಷನ್ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ವಿ. ದೊಡ್ಡ ಕೇಶವ ರೆಡ್ಡಿ ಸೇರಿದಂತೆ ಹಲವು ಗಣ್ಯರು ಘನ ಉಪಸ್ಥಿತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ಪ್ರೊ. ಎನ್. ಶಾಂತನಾಯ್ಕ, ಡಾ. ರಾಮ್ ಕಿರಣ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ
ಮಲ್ಲಿಕಾರ್ಜುನ ತುರುವನೂರು ಇವರಿಂದ ಸುಗಮ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಎಸ್.ಕೆ.ಆರ್. ಜಿಲಾನಿ ಬಾಷಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದ ವತಿಯಿಂದ ರೇಣುಕ ಯಲ್ಲಮ್ಮ ಮಹಾತ್ಮ ಬಯಲಾಟ ಪ್ರದರ್ಶನ ಜರಗಲಿವೆ ಎಂದರು.
ಕಾರ್ಯಕ್ರಮವನ್ನು ಬಸವರಾಜ ಅಮಾತಿ ಮತ್ತು ವಿಷ್ಣು ಹಡಪದ ನಿರೂಪಿಸಲಿದ್ದಾರೆ ಎಂದು ಹೊನ್ನೂರಸ್ವಾಮಿ ಮಾಹಿತಿ ನೀಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಈ ಸುದ್ದಿಗೋಷ್ಠಿಯಲ್ಲಿ
ಎರಿಸ್ವಾಮಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷ ವೈ ಪ್ರಭು ಇದ್ದರು.


