ಬಳ್ಳಾರಿ, ಮಾ.28: ಕ್ರೈಸ್ತ ಜನಾಂಗದ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಸರ್ಕಾರಿ ಜಾಗದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಗಳು ಅತಿಕ್ರಮಣವನ್ನು ನಡೆಸುತ್ತಿದ್ದು ಅತಿಕ್ರಮಣಕಾರರನ್ನು ತಕ್ಷಣ ತೆರವುಗೊಳಿಸಿ ಕ್ರೈಸ್ತ ಸಮುದಾಯದ ಸ್ಮಶಾನವನ್ನು ರಕ್ಷಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ
ನಗರದ ಡಯಾಸಿಸ್ ಕ್ಯಾಥೋಲಿಕ್ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ದೂರು ಮನವಿಯನ್ನು ಸಲ್ಲಿಸಿ ಮಾತನಾಡಿದ ಜೆರಾಲ್ಡ್, 2011ರಲ್ಲಿ ಕ್ರೈಸ್ತ ಸಮುದಾಯದ ಸ್ಮಶಾನಕ್ಕಾಗಿ ಅಂದಿನ ಜಿಲ್ಲಾಧಿಕಾರಿ ನಕುಲ್ ಅವರಿಗೆ ಅರ್ಜಿಯನ್ನು ಸಲ್ಲಿಸಿಕೊಳ್ಳಲಾಗಿತ್ತು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, 2012ರಲ್ಲಿ ಜಿಲ್ಲಾಧಿಕಾರಿಗಳು ಬಳ್ಳಾರಿ ನಗರದ 29ನೇ ವಾರ್ಡಿನ ಟಿ.ಎಸ್. ನಂ. 956/1ರಲ್ಲಿ 1.53 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿದ್ದರು.
ಆದರೆ ನಂತರ ಈ ಜಾಗದಲ್ಲಿ ಕೆಲವರು ಅಕ್ರಮವಾಗಿ ಮನೆಗಳು ಹಾಗೂ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ಸ್ಮಶಾನದ ಜಾಗವನ್ನು ಅತಿಕ್ರಮಿಸಿಕೊಂಡಿರುತ್ತಾರೆ 2014ರಿಂದ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗುತ್ತಿದೆ. ಆದರೆ ಅಧಿಕಾರಿಗಳಿಂದ ಯಾವುದೇ ಚಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ ಮತ್ತು 2015 ಮತ್ತು 2017ರಲ್ಲಿ ಕೂಡ ಅತಿಕ್ರಮಣ ತೆರವುಗೆ ಆದೇಶಗಳಿದ್ದರೂ, ನಮ್ಮ ಸಮಸ್ಯೆಯನ್ನು ಪರಿಹರಿಸಲು ಯಾರು ಮುಂದಾಗಿಲ್ಲ ಎಂದು ಜೆರ್ರಿ ಬೇಸರವನ್ನು ವ್ಯಕ್ತಪಡಿಸಿದರು.
2017ರಲ್ಲಿ 14 ಜನರಿಗೆ ತಾತ್ಕಾಲಿಕವಾಗಿ ನೀಡಿದ್ದ ಮಂಜೂರಾತಿಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದರೂ, ಅಕ್ರಮ ನಿರ್ಮಾಣಗಳು ಮುಂದುವರಿದಿವೆ. 2019ರಲ್ಲಿ ಕೆಲವು ಮನೆಗಳನ್ನು ತೆರವುಗೊಳಿಸಿದರೂ, ಮತ್ತೆ ಅತಿಕ್ರಮಣ ಹೆಚ್ಚಾಗಿದೆ.
ಇದರಿಂದಾಗಿ 2022 ಮತ್ತು 2025ರಲ್ಲಿ ಪುನಃ ಅರ್ಜಿಗಳನ್ನು ಸಲ್ಲಿಸಿದರೂ ಫಲ ಕಂಡಿಲ್ಲ. ಇತ್ತೀಚೆಗೆ 2026 ಮಾರ್ಚ್ 23ರಂದು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅತಿಕ್ರಮಣ ತಡೆಯಲು ಪ್ರಯತ್ನಿಸಿದ ವೇಳೆ ನಮ್ಮ ಸಂಘದ ಪದಾಧಿಕಾರಿಗಳ ಮೇಲೆ ದೌರ್ಜನ್ಯ ಏಸಗಲಾಗಿದೆ ಎಂದು ಆರೋಪಿಸಿದ್ದಾರು.
ಹೀಗಾಗಿ, ತಕ್ಷಣ ಅತಿಕ್ರಮಣ ತೆರವುಗೊಳಿಸಿ, ಸ್ಮಶಾನ ಜಾಗವನ್ನು ರಕ್ಷಿಸುವಂತೆ ಧರ್ಮಗುರುಗಳು ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಅಧಿಕಾರಿಗಳಿಗೆ ವಿನಂತಿಸಿದ್ದಾರೆ.


