ಗೋಕಾಕ: ಮತ್ತೊಬ್ಬರ ಕುರಿತು ಸಹನೆ ಮತ್ತು ಅತ್ಯಂತ ʼಕಳವಳʼ ವ್ಯಕ್ತಪಡಿಸುವ ಜೀವವೇ ಮಹಿಳೆ ಎಂದು ಇಲ್ಲಿನ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಚೈತ್ರಾ ಕುಲಕರ್ಣಿ ಅರ್ಥೈಸಿದರು.
ಶುಕ್ರವಾರ ಸಂಜೆ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಸಿಲಾಗಿದ್ದ ʼಅಂತರಾಷ್ಟ್ರೀಯ ಮಹಿಳಾ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆʼಯನ್ನು ಪುರುಷರೊಂದಿಗೆ ಹೋಲಿಕೆ ಮಾಡಿದಾಗ ಅವಳು ನೈಸರ್ಗಿಕ ಕಾರಣಗಳಿಂದಾಗಿ ದುರ್ಬಲಳೇ ಹೊರತು ಮತ್ಯಾವುದೇ ಕಾರಣಗಳಿಂದಲ್ಲ ಎಂದು ಪ್ರತಿಪಾದಿಸಿದರು.
ಪ್ರಸ್ತುತವಾಗಿ ಪ್ರಪಂಚದಲ್ಲಿ ಮಹಿಳೆಯರು ಪುರುಷ ಸರಿ-ಸಮನಾಗಿ ಕಾರ್ಯ ನಿರ್ವಹಿಸುತ್ತಲೇ ಇರುವುದರಿಂದ ಇನ್ನು ಮಹಿಳಾ ದಿನಾಚರಣೆ ಎಂದು ಆಚರಣೆ ಮಾಡದೇ “ಮಾನವರ ದಿನಾಚರಣೆʼ ಎಂದು ಆಚರಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹಾದೇವ ಕಾನಟ್ಟಿ ಅವರು ಮಾತನಾಡಿ, ಮಹಿಳೆಯರು ತಮ್ಮ ಕೌಶಲ್ಯದ ಮೂಲಕ ಪುರಷರೊಂದಿಗೆ ಪೈಪೋಟಿ ನಡೆಸಿ ಪರಿಶ್ರಮದ ಮೂಲಕ ಎಲ್ಲ ರಂಗಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ಇನ್ನು ಅವರಿಗೆ ಯಾವುದೇ ಮೀಸಲಾತಿ ಕೇಳುವ ಪ್ರಮೇಯವೇ ಬರಲಾರದು. ಪುರಷರೇ ತಮಗೆ ಮೀಸಲಾತಿ ಬೇಕು ಎನ್ನುವ ಮಟ್ಟಿಗೆ ಮಹಿಳೆಯರು ಸರ್ವ ಕ್ಷೇತ್ರಗಳಲ್ಲಿ ಪಾಂಡಿತ್ಯ ಸಾಧಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಬೇಕಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಕೆ.ಬಿ. ಶೆಟ್ಟಿ ಅವರ ಸಂದೇಶ ಪ್ರಸ್ತುತ ಪಡಿಸಲಾಯಿತು.
ಅತಿಥಿ-ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ವಿವೇಕ ಜಾಗೃತ ಬಳಗದ ದಕ್ಷ ಸೇವಕಿ ಸುಜಾತಾ ರಾಮಕೃಷ್ಣ ಅವರು ಮಾತನಾಡಿ, ಪ್ರೀತಿ-ವಾತ್ಸಲ್ಯ-ಮಮತೆ ಇವೆಲ್ಲವುಗಳ ಭಂಡಾರವೇ ಸ್ತ್ರೀ ಎಂದು ಅಭಿಪ್ರಾಯಿಸಿದರು.
ಇನ್ನೋರ್ವ ಅತಿಥಿ ಡಾ. ಕೀರ್ತಿ ಬೀರನಗಡ್ಡಿ ಮತ್ತು ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಬಿ.ಪಾಟೀಲ ಮಾತನಾಡಿದರು.
ದಿನಾಚರಣೆ ಪ್ರಯುಕ್ತ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ವೇದಿಕೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ವಿ.ವೈ.ಜಾಗನೂರ, ವಿ.ಬಿ.ಮೆಳವಂಕಿ. ಎ.ಬಿ. ಖಂಡ್ರಟ್ಟಿ, ಬಿ.ಐ.ವಡೇರಹಟ್ಟಿ, ವಿ.ಜಿ.ಸಿದ್ಧಾಪೂರಮಠ ಮತ್ತಿತರರು ಇದ್ದರು.
ಆರತಿ ನಾಡಗೌಡ ಹಾಗೂ ಬಳಗದವರು ಪ್ರಾರ್ಥಿಸಿದರು. ಸಂಗೀತಾ ಬನ್ನೂ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಗೋರೋಶಿ ಸ್ವಾಗತಿಸಿದರು. ಪ್ರತಿಭಾ ನಿಂಬಾಳ್ಕರ ನಿರೂಪಿಸಿ, ವಂದಿಸಿದರು.


