ರಾಮದುರ್ಗ: ಅಧಿಕಾರ ಶಾಶ್ವತ ಅಲ್ಲ. ಸಿಕ್ಕ ಅವಕಾಶ ಬಳಸಿಕೊಂಡು, ಸಮಾಜ ಸಂಘಟನೆ ಹಾಗೂ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಋಣ ತೀರಿಸಲು ಬದ್ಧ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ ಪ್ರೀತಿ ವಿನಾಯಕ ಕಾಮಕರ ಹೇಳಿದರು.
ನಗರದ ರಾಧಾಪೂರ ಪೇಟೆಯಲ್ಲಿ ತಾಲೂಕು ಆಡಳಿತ, ದೇವಾಂಗ ಸಮಾಜ ಹಾಗೂ ನೇಕಾರ ಸಮುದಾಯಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ೧೦೪೭ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಓರ್ವ ಹಿಂದುಳಿದ ವರ್ಗದ ಸಾಮಾನ್ಯ ಮಹಿಳೆ ಉನ್ನತ ಸ್ಥಾನ ಪಡೆದಿರುವುದು ಇದೆ ಮೊದಲು. ಮೇಯರ್ ಸ್ಥಾನಕ್ಕೆ ತಲುಪಲು ರಾಮದುರ್ಗ ಸಮಾಜ ಬಾಂಧವರ ಆಶೀರ್ವಾದ ನನ್ನ ಮೇಲಿದೆ. ನೇಕಾರಿಕೆ ವೃತ್ತಿಗೆ ಇಂದು ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಜಿಲ್ಲೆಯ ನೇಕಾರರ ಸೀರೆಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ನೇಕಾರರ ಮಕ್ಕಳು ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳೆಬೇಕೆಂದು ಕರೆ ನೀಡಿದರು.
ತಾಲೂಕಿನ ನಾಗನೂರ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ ಡಿ.ಪಿ. ವಿಶೇಷ ಉಪನ್ಯಾಸದಲ್ಲಿ, ಕನ್ನಡದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯ ಅವರು, ಹೆಣ್ಣು, ಗಂಡು, ಮೇಲುಕೀಳು, ಜಾತಿ-ಪಂಥ ಆಚರಣೆಗಳ ಬೇಧಗಳನ್ನು ಗುರುತಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ ವಚನಗಳ ಮೂಲಕ ಎಳೆ ಎಳೆಯಾಗಿ ತೋರಿಸಿದ್ದಾರೆ. ಸುರಪುರ ತಾಲೂಕು ಮುದನೂರಿನಲ್ಲಿ ಬೇಸಾಯ ಹಾಗೂ ನೆಯ್ಗೆ ಕಾಯಕದೊಂದಿಗೆ ತನ್ನ ಕಣಜದಲ್ಲಿದ್ದ ಇಳೆಯ ಬೆಳೆಯನ್ನು ಬಳಸಿ, ಜನರಿಗೆ ಹಂಚುವ ಮೂಲಕ ದಾಸೋಹ ಪರಿಕಲ್ಪನೆ ಬಿತ್ತಿದ ಶರಣರಲ್ಲಿ ಮೊದಲಿಗ ಎಂದು ಹೇಳಿದರು.
ಗ್ರೇಡ್-೨ ತಹಶೀಲ್ದಾರ್ ಸಂಜಯ್ ಖಾತೇದಾರ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಮುರುಡಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ವೇದಮೂರ್ತಿ ಶಂಕ್ರಯ್ಯಸ್ವಾಮಿ ದೇವಾಂಗಮಠ, ವೇದಮೂರ್ತಿ ನಿರಂಜನಸ್ವಾಮಿ ದೇವಾಂಗಮಠ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯೆ ರೇಶ್ಮಾ ಕಾಮಕರ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಶಿವಾನಂದ ಬಳ್ಳಾರಿ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಸೂಳಿಭಾಂವಿ, ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ನಾರಾಯಣ ಹೂಲಿ, ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಕುಬೇರ ಗರಡಿಮನಿ, ಮುಖಂಡರಾದ ಏಕನಾಥ ಕೊಣ್ಣೂರ, ನೇಮಣ್ಣ ಆರಿ, ಮನೋಹರ ಹೊನ್ನುಂಗರ, ದಾಮೋದರ ರಾಮದುರ್ಗ, ಶ್ರೀಕಾಂತ ಮುಗಳಿ ಸೇರಿದಂತೆ ಇತರರಿದ್ದರು.
ಪತ್ರಕರ್ತ ರಾಮಚಂದ್ರ ಯಾದವಾಡ ಸ್ವಾಗತಿಸಿದರು. ಪ್ರಥಮೇಶ ಯಾದವಾಡ ಪ್ರಾರ್ಥಿಸಿದರು. ಶಿಕ್ಷಕ ಎಸ್.ಎಂ. ಕಲ್ಲೂರ ನಿರೂಪಿಸಿದರು. ವಿನೋದ ಕರದಿನ ವಂದಿಸಿದರು.
ನೇಕಾರರ ಮಕ್ಕಳು ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳಬೇಕು :ಪ್ರೀತಿ ವಿನಾಯಕ ಕಾಮಕರ


