ಬಳ್ಳಾರಿ ಮಾ,18.. ತುರ್ತು ಪರಿಸ್ಥಿತಿಯ ಸಂದರ್ಭ ಹಾಗೂ ವಿಪತ್ತುಗಳು ಸಂಭವಿಸಿದ ಸಮಯದಲ್ಲಿ ರೆಡ್ ಕ್ರಾಸ್ ಮತ್ತು ರೇಂಜರ್ಸ್, ರೋವರ್ಸ್ ಗಳ ಪಾತ್ರ ತುಂಬಾ ಅಮೂಲ್ಯವಾದುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸುಮನ್ ಡಿ. ಪನ್ನೇಕರ್ ನುಡಿದರು.
ಅವರು ಇಂದು ನಗರದ ಸರಳಾದೇವಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್
ಸಂಸ್ಥೆಯು ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಮತ್ತು ಸ್ವಯಂ ಸೇವಕರಿಗಾಗಿ ಆಯೋಜಿಸಿದ್ದ ‘ ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ‘ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಥಮ ಚಿಕಿತ್ಸೆಯು ರೋಗಿಗೆ ತಕ್ಷಣದ ವೈದ್ಯಕೀಯ ನೆರವು ನೀಡಿದರೆ ವಿಕೋಪ ನಿರ್ವಹಣೆಯು ಪಾರುಗಾಣಿಕಾ ಮತ್ತು ಚೇತರಿಕೆಯ ಮೂಲಕ ಪ್ರಾಣಹಾನಿ ಕಡಿಮೆ ಮಾಡುತ್ತದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪೋಲಾ ರಾಧಾಕೃಷ್ಣ ಮಾತನಾಡಿ.ಮಡಿಕೇರಿಯಲ್ಲಿ ಈ ಹಿಂದೆ ಗುಡ್ಡ ಕುಸಿತ ಉಂಟಾಗಿ ನೂರಾರು ಜನ ತೊಂದರೆಗೆ ಈಡಾದ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಿರ್ವಹಿಸಿದ ಕಾರ್ಯವನ್ನು ನೆನಪಿಸಿಕೊಂಡು ಶ್ಲಾಘಿಸಿದರು.
ರೆಡ್ ಕ್ರಾಸ್ ಸಂಸ್ಥೆಯ. ಉಪಾಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಕಾರ್ಯದರ್ಶಿ ಎಂ. ಎ ಶಕೀಬ್ ಇದ್ದರು.
ಅಧ್ಯಕ್ಷತ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಪ್ರಹ್ಲಾದ್ ಚೌದ್ರಿ ಪ್ರಕೃತಿ ವಿಕೋಪಗಳು ಅಥವಾ ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಗಾಬರಿಯಾಗದೆ ದಿಟ್ಟತನ ಮತ್ತು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದು ಮುಖ್ಯ ಎಂದರು.
ವೇದಿಕೆಯ ಮೇಲೆ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಪಲ್ಲವಿ ಇದ್ದರು. ಈ ವೇಳೆ ರೋವರ್ ಲೀಡರ್ ಡಾ.ಗುರುಬಸಪ್ಪ , ರೇಂಜರ್ ಲೀಡರ್ ಡಾ.ಸಲಿಹಾ ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.


