ಬಳ್ಳಾರಿ, ಮಾ.18. ನಗರದ ರಾಷ್ಟ್ರೀಯ ಬಸವದಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು
ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನಾ ಗೀತೆಯನ್ನು ಡಾ. ತಿಪ್ಪೇರುದ್ರ ಸಂಡೂರು ನೆರೆವೇರಿಸಿ ಕೊಟ್ಟರು.
ಉಪನ್ಯಾಸಕಿ ಹಾಗೂ ಸಾಹಿತ್ಯ ಪರಿಷತ್ತಿನ ಮಹಿಳಾ ಸದಸ್ಯರಾದ ಶ್ರೀಮತಿ ಜೆ ಭಾಗ್ಯಲಕ್ಷ್ಮಿ ರವರು ಗಣ್ಯಮಾನ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಕಾರ್ಯಕ್ರಮಗಳ ಜೊತೆಗೆ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ ಜೊತೆಗೆ ರಾಜ್ಯದಲ್ಲಿಯೇ ಹೆಚ್ಚು ದತ್ತಿ ಸಂಗ್ರಹಿಸಿದ ಜಿಲ್ಲೆ ಬಳ್ಳಾರಿ. ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಕನ್ನಡ ಮನಸುಗಳು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಭಾಗವಹಿಸಿ ಎಂದು ತಮ್ಮ ಪ್ರಾಸ್ತಾನಿಕ ನುಡಿಯಲ್ಲಿ ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಚಾರ್ಯರಾದ ಡಾ. ಎಚ್ ಮಲ್ಲಿಕಾರ್ಜುನಗೌಡ ರವರು ಉದ್ಘಾಟಿಸಿ ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಮಾಜ ಬದಲಾಗಲು ಸಾಧ್ಯ ಎಂದು ತಿಳಿಸಿದರು.
ದತ್ತಿ ಉಪನ್ಯಾಸವನ್ನು ನೀಡಿದ ವಿಜಯನಗರ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಲಗಶೆಟ್ಟಿ ರವರು ತಮ್ಮ ಉಪನ್ಯಾಸದಲ್ಲಿ ಸ್ವಾರ್ಥವಿಲ್ಲದ ಸಮಾಜ ನಿರ್ಮಾಣವಾಗಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಮನೆಯಲ್ಲಿನ ನೀರು ಭಕ್ತಿ ಸೇರಿದಾಗ ತೀರ್ಥವಾಗುತ್ತದೆ, ಮನೆಯಲ್ಲಿರುವ ಅನ್ನ ದೇವಸ್ಥಾನದಲ್ಲಿ ಪ್ರಸಾದವಾಗುತ್ತದೆ ಇಂತಹ ಉಪನ್ಯಾಸಗಳನ್ನು ಕೇಳಿದಾಗ ಮೃಗದಂತಹ ಮನಸ್ಸು ಮಾನವೀಯ ಮೌಲ್ಯಗಳನ್ನು ತಾಳುತ್ತದೆ.
ವ್ಯಕ್ತಿಯ ದೃಷ್ಟಿ ಬದಲಾದಾಗ ಮಾತ್ರ ಸೃಷ್ಟಿ ಬದಲಾಗುತ್ತದೆ ಈ ರೀತಿಯ ಆಧ್ಯಾತ್ಮದ ಸಿಂಚನದಿಂದ ಸಮಾಜ ಸುಧಾರಣೆಯಾಗಲು ಸಾಧ್ಯ. ಮೊಬೈಲ್ ಸಂಸ್ಕೃತಿ ಹೊರಟು ಹೋಗಿ ಪುಸ್ತಕ ಸಂಸ್ಕೃತಿ ಮಕ್ಕಳಲ್ಲಿ ಮೇಳಯಿಸುವಂತೆ ತಂದೆ ತಾಯಿಗಳು ಕಾಳಜಿ ವಹಿಸಬೇಕು. ತಂದೆ ತಾಯಿಗಳನ್ನು ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಕಳಿಸುವ ಸಂಸ್ಕೃತಿ ನಿಲ್ಲಬೇಕಾದರೆ ಪ್ರತಿನಿತ್ಯ ಮನೆ ಮನಗಳಲ್ಲಿ ವಚನ ಸಿಂಚನವಾಗಬೇಕು. ಇಂದಿನ ಸಮಾಜದಲ್ಲಿ ಬಡವರು ಮತ್ತು ಜನಸಾಮಾನ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ . ಶ್ರೀಮಂತರಲ್ಲ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ ರವರು ಉಪಸ್ಥಿತರಿದ್ದರು.


