ಬಳ್ಳಾರಿ, ಮಾ.17..ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ಇಂದು ರೈತರ ಪಂಪ್ ಸೆಟ್ ಗಳಿಗೆ 7 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ಪಟ್ಟಣದ ಕೆ.ಇ ಬಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಸಂಘ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ, ತುಂಗಭದ್ರಾ ಜಲಾಶಯದ ಗೇಟುಗಳು ದುರಸ್ತಿ ಕಾಮಗಾರಿಯಲ್ಲಿರುವ ಕಾರಣ ಈ ಬಾರಿ ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ನೀಡುವುದನ್ನು ನಿಲ್ಲಿಸಲಾಗಿದೆ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಹಲವಾರು ರೈತರು ತಮ್ಮ ಜೀವನ ಮತ್ತು ಕುಟುಂಬವನ್ನು ಸಲಹುವ ಸಲುವಾಗಿ ತಮಗೆ ಲಭ್ಯವಿರುವ ಪಂಪ್ ಸೆಟ್ಟಿನ ನೀರಿನ ಮೂಲಕ ಎರಡನೇ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ, ಆದರೆ ಅದೇನೋ ಗಾದೆ ತರ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಅನ್ನುವ ಹಾಗೆ, ಬೆಳೆ ಬೆಳೆಯಲು ಎಲ್ಲಾ ರೀತಿಯ ವಾತಾವರಣದ ಅನುಕೂಲಕರವಾಗಿದ್ದರೂ ಅದನ್ನು ಬಳಸಿಕೊಂಡು ಬೆಳೆ ಬೆಳೆಯಲು ಸದ್ಯ ಈಗ ವಿದ್ಯುತ್ ಸಮಸ್ಯೆ ಎದುರಿಸುವಂತೆ ಆಗಿದೆ. ಮುಷ್ಟಿಗಟ್ಟೆ ಗೆಣಿಕೆಹಾಳು ಕ್ಯಾದಿಗೆಹಾಳು ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ಪಂಪ್ಸೆಟ್ ನಿಂದ ತಮ್ಮ ಬೆಳೆ ಗಳಿಗೆ ನೀರು ಹಾಯಿಸಲು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಲ್ಲದೆ, ಅವರಿಗೆ ನೀಡುವ 7 ಗಂಟೆಗಳ ವಿದ್ಯುತ್ತನ್ನು ಪದೇಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ, ಇದರಿಂದಾಗಿ ರೈತರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ನೀರು ಹರಿದ ಭೂಮಿ ಕರೆಂಟ್ ಹೋಗಿ ಬಂದಮೇಲೆ ಮತ್ತೆ ಅದು ನೀರನ್ನು ಪಡೆದು ಇತರೆ ಪ್ರದೇಶವು ನೀರನ್ನ ಕಾಣದಂತಾಗಿದೆ. ವಿದ್ಯುತ್ ಅನ್ನು ಪದೇ ಪದೇ ಸಂಪರ್ಕ ಕಡಿತ ಮಾಡುತ್ತಿರುವುದು ಮತ್ತು ವಿದ್ಯುತ್ ನ ವೋಲ್ಟೇಜ್ ಕಡಿಮೆ ಇರುವ ಕಾರಣ ರೈತರು ರಾತ್ರಿ ಪೂರ್ತಿ ವಿದ್ಯುತ್ ಗಾಗಿ ಕಾಯಬೇಕಾಗಿದೆ ಇದನ್ನು ಬಗೆಹರಿಸಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಪಂಪ್ ಸೆಟ್ ಗಳಿಗೆ ಕೆಲವು ಬಾರಿ ಕಡಿಮೆ ವೋಲ್ಟೇಜ್ ಇರುವ ಕಾರಣ ಭೂಮಿಯುಂದ ನೀರು ಸಹ ಮೇಲೆ ಬರುತ್ತಿಲ್ಲ.
ಜೊತೆಗೆ ಈ ಸಮಯ ಬತ್ತದ ಬೆಳೆಯು ತೆನೆ ಬಿಡುವ ಅವಧಿ ಆಗಿರುವುದರಿಂದ ರೈತರಿಗೆ ಏಳು ಗಂಟೆ ವಿದ್ಯುತ್ ಜೊತೆಗೆ ಇನ್ನೂ ಹೆಚ್ಚಿನ ಎರಡು ಗಂಟೆ ವಿದ್ಯುತ್ತನ್ನು ರೈತರ ಹಿತದೃಷ್ಟಿಯಿಂದ ಪುರೈಸುದ್ದಲ್ಲಿ ಅನುಕೂಲವಾಗುತ್ತದೆ, ಒಟ್ಟು 9 ಗಂಟೆ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಬಸವನಗೌಡ, ಬುಡ್ಡನಗೌಡ, ಜಡೇಶ ಗೌಡ, ಸಂಜೀವ್ ನಾಯಕ್, ಗಾದಿಲಿಂಗ, ಶಿವಪುತ್ರ, ಪಂಪನಗೌಡ, ವೀರನಗೌಡ, ಜಿ.ಟಿ.ಮಂಜು ಎರೆಪ್ಪ ಗೌಡ , ಸುರೇಶ್, ದೇವಣ್ಣ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು


