ಬಬಲೇಶ್ವರ : ’ಮೊಬೈಲ್ ಬಿಡಿ ಪುಸ್ತಕ ಹಿಡಿ’ ಎಂಬ ವಿವೇಚನಾಪೂರ್ಣ ಚಿಂತನೆಯನ್ನು ಮಕ್ಕಳ ಮನದಲ್ಲಿ ಮೂಡಿಸಿದಾಗ ಅವರ ಭವಿತವ್ಯದ ಬಾಗಿಲು ತೆರೆದಂತೆ. ಓದುವಲ್ಲಿನ ಆಸಕ್ತಿ ಬದುಕನ್ನು ಬರೆದು ಬಾಳನ್ನು ಬೆಳಗಿಸಬಲ್ಲದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಬಬಲೇಶ್ವರದ ಜಾನಕಿ ಶ್ರೀರಾಮ ವಿದ್ಯಾ ಮಂದಿರದ ೩೫ ನೇ ವಾರ್ಷಿಕೋತ್ಸವ ಹಾಗೂ ೭ ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಮಕ್ಕಳು ಮೊದಲು ಗುರುವಿನ ಗುಲಾಮನಾಗಬೇಕು. ಇಷ್ಟಪಟ್ಟು ಓದಿದಾಗ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯ. ಸತತ ಓದು ವಿದ್ಯಾರ್ಥಿಗಳ ಗುರಿಗೆ ಸಾಧನೆಯ ಮೆಟ್ಟಿಲಾಗಬಹುದು ಎಂದರು.
ಗಲಗಲಿಯ ನಂದಿ ಶುಗರ್ಸ್ ಪ್ಯಾಕ್ಟರಿಯ ನಿರ್ದೇಶಕ ರಮೇಶ ಬಡ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸು ಬಿಳಿಹಾಳೆ ಇದ್ದ ಹಾಗೆ. ಪ್ರೀತಿಯೆಂಬ ಲೆಕ್ಕಣಿಕೆಯಿಂದ ಬದುಕಿನ ಮುನ್ನುಡಿ ಬರೆಯಬೇಕು. ಆಗ ಅವರ ಕನಸು ನಾಳೆಯ ನನಸಾಗಿ ಜೀವನದ ಅಭ್ಯುದಯಕ್ಕೆ ನಾಂದಿಯಾಗಬಲ್ಲದು. ಪಾಲಕರು ಮಕ್ಕಳು ಶಾಲೆಗೆ ಹೋಗಿದ್ದಾರೆ ಎಂದು ಸುಮ್ಮನೆ ಕೂರದೆ ಅವರ ಬಗ್ಗೆ ಕಾಳಜಿ ವಹಿಸಬೇಕೆಂದರು.
ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ತಮಗೊಂಡ ಅಧ್ಯಕ್ಷತೆ ವಹಿಸಿದ್ದರು. ಶಿರಬೂರ ಪಿ.ಕೆ.ಪಿ.ಎಸ್.ಅಧ್ಯಕ್ಷ ರಾಮನಗೌಡ ಪಾಟೀಲ ಆರೋಗ್ಯ ಅಧಿಕಾರಿ ಡಾ.ಅಪ್ಪಾಸಾಹೇಬ ಇನಾಮದಾರ, ಡಾ. ಪವನ ಬಳ್ಳೂರ, ಕೆ.ಎಂ.ಎಫ್.ನಿರ್ದೇಶಕ ಸಿದರಾಯ ಜಂಗಮಶೆಟ್ಟಿ, ಅಮಸಿದ್ದ ಕಣಬೂರ ಅತಿಥಿಯಾಗಿದ್ದರು. ಈ ವೇಳೆ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು. ಹಾಗೂ ಹತ್ತಲವು ಸ್ಪರ್ಧೆಗಳಲ್ಲಿ ಭಾಗವಹಿಸಿ, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಜ್ಞಾನ ಮತ್ತು ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಪಂ ಮಾಜಿ ಸದಸ್ಯ ಮಲ್ಲು ಕನ್ನೂರ ಸ್ವಾಗತಿಸಿದರು. ಶಿಕ್ಷಕ ಬಿ.ಎ. ಬಡಚಿ ನಿರೂಪಿಸಿದರು. ಮುಖ್ಯಶಿಕ್ಷಕ ಎಸ್.ಎಂ.ಕೋಟ್ಯಾಳ ವಂದಿಸಿದರು.


