ಬಳ್ಳಾರಿ. ಮಾ. 03 : ಮಾನವನ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟ, ಆ ಅವಧಿಯಲ್ಲಿ ನಾವು ಸರಿಯಾದ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಜೀವನದಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ ಒಬ್ಬ ಯುವಕ ಅಥವಾ ಯುವತಿ 20ರಲ್ಲಿ ಎಡವಿದರೆ 70ನೇ ವಯಸ್ಸಿನಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಕಾಳಪ್ಪ ಪತ್ತಾರ್ ತಿಳಿಸಿದರು.
ಅವರು ನಗರದ ಮಧಿಕೇರಿ ಭೀಮಯ್ಯ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪುನರ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಉನ್ನತವಾದ ಶಿಕ್ಷಣವನ್ನು ಪಡೆದುಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಅದು ಬಿಟ್ಟು ನಾನಾತರದ ಅಡ್ಡದಾರಿಗಳನ್ನು ಹಿಡಿದು ಸಮಯವನ್ನು ವ್ಯರ್ಥ ಮಾಡಿದಲ್ಲಿ ಜೀವನದ ಕೊನೆಯ ದಿನಗಳಲ್ಲಿ ಬಹಳ ಪಶ್ಚತಾಪ ಪಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯ ಭರಿತವಾದ ಮಾತುಗಳನ್ನಾಡಿದ ಕಾಳಪ್ಪ ಪತ್ತಾರ್, ತಮ್ಮ ಭಾಷಣ ದುದ್ದಕ್ಕೂ ಹಾಸ್ಯ ಪ್ರಸಂಗಗಳನ್ನು ಹೇಳುತ್ತಾ ಹಳೆ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು. ಜೊತೆಗೆ ಜೀವನದ ಕುರಿತು ಗಂಭೀರವಾದ ವಿಷಯಗಳನ್ನು ತಿಳಿಸಿ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಹಳೆ ನಾಗರಾಜರಾಯರು, ಆಶಾ ಬಾಯಿ, ಬೆಟ್ಟಪ್ಪ ಸೇರಿದಂತೆ ಅಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಹಾಲಿ ಮುಖ್ಯ ಉಪಾಧ್ಯಯರಾದ ಶ್ರೀನಿವಾಸ್ ಹಾಗೂ ನೂರಾರು ಜನ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.


