ಬಳ್ಳಾರಿ04..: ಮಾತೃ ಭಾಷೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದು ಡಾ. ಮೈಮುದ ಬೇಗಂ ನುಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಕ.ಸಾ.ಪ ವತಿಯಿಂದ ಏರ್ಪಡಿಸಿದ್ದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಮತ್ತು ವಡ್ಡಿನಶೆಟ್ರ ಶಿದ್ಧರಾಮಯ್ಯ ಮತ್ತು ಶ್ರೀಮತಿ ಮಹಾಂತಮ್ಮ ದತ್ತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎನ್ನುವ ಕುವೆಂಪು ಅವರ ನುಡಿಯಂತೆ ಮಾತೃ ಭಾಷೆಯನ್ನು ಉಳಿಸುವಲ್ಲಿ ಮಹಿಳೆಯರು ಮುಂದಾಗುವಂತೆ ಕರೆ ನೀಡಿದರು.
ಮೇಧಾ ಪದವಿ ಕಾಲೇಜಿನ ಉಪನ್ಯಾಸಕ ಡಾ. ವೈ. ಸುಮಾ ಮಾತೃ ಭಾಷೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಎನ್ನುವ ವಿಶೇಷ ಉಪನ್ಯಾಸ ನೀಡುತ್ತಾ ತಾಯಿಯ ಜೋಗುಳದ ಮೊದಲ ನುಡಿ ಯಾವ ಭಾಷೆಯಲ್ಲಿ ಮಗುವಿನ ಕಿವಿಗೆ ತಲುಪುತ್ತದೆಯೋ ಅದು ಮಗುವಿನ ಮಾತೃ ಭಾಷೆಯಾಗುತ್ತದೆ ಎಂದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಲೇಖಾ ಬಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳಿಗೆ ತಮ್ಮ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಕ.ಸಾಪದ ದತ್ತಿ ಕಾರ್ಯಕ್ರಮಗಳು ನಂದಾದೀವಿಗೆಯಂತೆ ಗಡಿನಾಡಿನಲ್ಲಿ ಕನ್ನಡತನವನ್ನು ಸದಾ ಜಾಗೃತಗೊಳಿಸುತ್ತಿದೆ ಎಂದು ದತ್ತಿ ದಾನಿಗಳಾದ ಡಾ. ವಿ.ಎಸ್. ಪ್ರಭಯ್ಯ ತಿಳಿಸಿದರು.
ಅಲ್ಲಂ ಸುಮಂಗಳಮ್ಮ ಪದವಿ ಮಹಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಾಧ್ಯಕ್ಷ ಹೆಚ್ ಸುರೇಶ್, ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಮೆಹತಾಬ, ಹೆಚ್. ಕಾಶೀನಾಥ್, ಮಂಜುನಾಥ ರೆಡ್ಡಿ ರಾಘವೇಂದ್ರ, ಯು. ಶ್ರೀನಿವಾಸಮೂರ್ತಿ ಮತ್ತಿತರರು ವೇದಿಕೆಯಲ್ಲಿದ್ದರು.
ವೀರಶೈವ ಕಾಲೇಜು ಅಧ್ಯಾಪಕರಾದ ಡಾ. ಭ್ರಮರಾಂಭ ಯಾಟಿ ಅವರನ್ನು ಸನ್ಮಾನಿಸಲಾಯಿತು.
ಕೋಶಾಧ್ಯಕ್ಷ ಬಸವರಾಜ ಗದಗಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತಿ ಸರ್ವರನ್ನು ಸ್ವಾಗತಿಸಿದರು. ಚಾಂದ್ ಪಾಷಾ ನಿರೂಪಿಸಿದರು. ಡಾ.ಎ.ಎನ್. ಸಿದ್ಧೇಶ್ವರಿ ವಂದಿಸಿದರು.


