ಬಳ್ಳಾರಿ, ಫೆ.02. ಪಂಜಾಬ್ನ ಅಮೃತಸರದಲ್ಲಿ ಫೆಬ್ರವರಿ 6 ರಿಂದ 8 ರವರೆಗೆ ನಡೆಯಲಿರುವ 12ನೇ ಹಿರಿಯರ ರಾಷ್ಟ್ರೀಯ ರಾಕೀಟ್ ಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾದ ಕರ್ನಾಟಕ ತಂಡದ ಕ್ರೀಡಾಪಟುಗಳಿಗೆ ಜೆಎಸ್ಡಬ್ಲ್ಯೂ ಫೌಂಡೇಶನ್ ಪ್ರೋತ್ಸಾಹ ನೀಡಿದೆ.
ಕರ್ನಾಟಕ ರಾಕೀಟ್ ಬಾಲ್ ಅಸೋಸಿಯೇಷನ್ ಮನವಿಗೆ ಸ್ಪಂದಿಸಿದ ಜೆಎಸ್ಡಬ್ಲ್ಯೂ ಫೌಂಡೇಶನ್, ತೋರಣಗಲ್ಲು ಓಪಿ ಜೆ ಕೇಂದ್ರದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್ ವಿತರಿಸುವ ಮೂಲಕ ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿತು. ಕ್ರೀಡಾ ಕಿಟ್ನಲ್ಲಿ ಟ್ರ್ಯಾಕ್ ಸೂಟ್, ಜರ್ಸಿ ಹಾಗೂ ಶೂಗಳನ್ನು ಒಳಗೊಂಡಿದ್ದು, ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದಿಂದ ಪುರುಷರ ವಿಭಾಗದಲ್ಲಿ 12 ಮತ್ತು ಮಹಿಳೆಯರ ವಿಭಾಗದಲ್ಲಿ 12 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪುರುಷರ ತಂಡವನ್ನು ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಮಹೇಂದ್ರ ಮುನ್ನಡೆಸಲಿದ್ದು, ಮಹಿಳಾ ತಂಡವನ್ನು ಹೊಸಪೇಟೆಯ ಯುವತಿ ಲಹರಿ ಮುನ್ನಡೆಸಲಿದ್ದಾರೆ.ಈ ಸಂದರ್ಭದಲ್ಲಿ ಜೆಎಸ್ಡಬ್ಲ್ಯೂ ಫೌಂಡೇಶನ್ ದಕ್ಷಿಣ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಕ್ರೀಡಾ ಕಿಟ್ ವಿತರಿಸಿ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಜೆಎಸ್ಡಬ್ಲ್ಯೂ ಫೌಂಡೇಶನ್ ಕ್ರೀಡಾ ಸಂಯೋಜಕ ಮಹಮ್ಮದ್ ರಫೀಕ್, ರಾಕೀಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಆರ್. ಚಂದ್ರಶೇಖರ್, ಉಪಾಧ್ಯಕ್ಷ ವಿ. ಲಕ್ಷ್ಮಣ್ ಹಾಗೂ ಈಶ್ವರ್ ಬಿ ಉಪಸ್ಥಿತರಿದ್ದರು.


