ಮೂಡಲಗಿ : ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಆಗುತ್ತಿದ್ದ ದುರ್ಬಲರ ಶೋಷಣೆ, ಜಾತೀಯತೆ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ವಿರುದ್ಧ ಸಾಮಾಜಿಕಕ್ರಾಂತಿ ಕೈಗೊಂಡ ಮಹಾನ್ ಪುರುಷ ಎಂದು ಮೂಡಲಗಿ ತಹಶೀಲ್ದಾರರಾದ ಶ್ರೀಶೈಲ ಗುಡುಮೆ ಹೇಳಿದರು.
ರವಿವಾರದಂದು ಪಟ್ಟಣದ ಮೂಡಲಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಮೂಡಲಗಿ ತಾಲೂಕಾ ಮಡಿವಾಳ ಸಮಾಜದ ಸಂಯುಕ್ತಾಶ್ರಯದಲ್ಲಿ ಜರುಗಿದ 916ನೇ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾತನಾಡಿದ ಅವರು, ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರಿಗೆಲ್ಲರಿಗೂ ಸಮಪಾಲು–ಸಮಬಾಳು ಒದಗಿಸಲು ಶ್ರಮಿಸಿದ ಮಾಚಿದೇವರು ಅನುಕರಣೀಯ ದೈವೀ ಪುರುಷರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಮಡಿವಾಳರ ಮಾತನಾಡಿ, ಮಡಿವಾಳ ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಮಕ್ಕಳು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆದುಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈಯಬೇಕು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಮಾಜಬಾಂಧವರಿಗೆ ಜಯಂತಿಯ ಶುಭಾಶಯ ಕೋರಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಬಾಂಧವರಾದ ಬಸವರಾಜ ಮಡಿವಾಳರ, ಗಿರೀಶ್ ಮಡಿವಾಳರ, ಶ್ರೀಶೈಲ ಮಡಿವಾಳರ, ಮಂಜುನಾಥ ಮಡಿವಾಳರ, ನಾಗೇಶ ಮಡಿವಾಳರ, ಶ್ರೀಕಾಂತ ಮಡಿವಾಳರ, ಹನಮಂತ ಮಡಿವಾಳರ, ಕಲ್ಲಪ್ಪ ಮಡಿವಾಳರ, ಆದೇಶ ಮಡಿವಾಳರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


