ಅಕ್ಕಿಯ ಅಕ್ರಮ ದಂಧೆ ಸಹಾಯಕ ಆಯುಕ್ತ ರಾಜೇಶ್ ದಾಳಿ : 523 ಪಡಿತರ ಅಕ್ಕಿ ವಶ
ಬಳ್ಳಾರಿ, ಜ.24..: ಸಾರ್ವಜನಿಕರಿಗೆ ವಿತರಣೆಯಾಗಬೇಕಿದ್ದ 50 ಕಿಲೋ 523 ಚೀಲ ಪಡಿತರ ಅಕ್ಕಿಯನ್ನು ಗುಜರಾತ್ ಗೆ ಸಾಗಾಣೆ ಮಾಡಲು ಗುಜರಾತಿನ ಲಾರಿಗಳಲ್ಲಿ ಲೋಡ್ ಮಾಡುತ್ತಿದ್ದ ಅಕ್ಕಿ ಮತ್ತು ಎರಡು ಲಾರಿಗಳನ್ನು ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ. ಅವರು ನಿನ್ನೆ ರಾತ್ರಿ ಮಿಂಚಿನ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ನಗರದ ಎಸ್.ಎಲ್.ಎನ್ ಮಾಲ್ ಬಳಿ ಇರುವ ದರೂರು ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಪಡಿತರ ಅಕ್ಕಿಯನ್ನು ಬಳ್ಳಾರಿಯ ಮಿನಿ ಸರಕು ಸಾಗಣೆ ವಾಹನಗಳ ಮೂಲಕ ತಂದು ಗುಜರಾತ್ ಮೂಲದ ಲಾರಿಯಲ್ಲಿ ಲೋಡ್ ಮಾಡಲಾಗುತ್ತಿತ್ತು.
ಈ ಸಂದರ್ಭದಲ್ಲಿ ದಾಳಿ ಮಾಡಿದ ರಾಜೇಶ್ ಅಕ್ಕಿಯನ್ನು ನೋಡು ಮಾಡಲು ಹಗರಿಬೊಮ್ಮನಹಳ್ಳಿಯಿಂದ ಬಂದಿದ್ದ 10 ಜನ ಹಮಾಲಿಗಳು ಚಿಕ್ಕ ಲಾರಿಯಿಂದ ದೊಡ್ಡ ಲಾರಿಗೆ ಲೋಡ್ ಮಾಡುತ್ತಿದ್ದರು. ಇವರಿಗೆ ಶ್ರೀಧರ್ ಎಂಬಾತ 750 ಕೂಲಿ ನೀಡಿ ಕರೆಸಿದ್ದ ಎಂದು ತಿಳಿದು ಬಂದಿದೆ.
ಈ ಅಕ್ಕಿ ಅಕ್ರಮ ದಂಧೆಯ ಅತ್ಯಂತ ಖಚಿತವಾದ ಮಾಹಿತಿಯ ಮೇರೆಗೆ ಸ್ವತಃ ರಾಜೇಶ್ ಅವರು ತಲೆಗೆ ಟವಲ್ ಕಟ್ಟಿಕೊಂಡು ಬುಲೆಟ್ ಗಾಡಿಯಲ್ಲಿ ಬಂದು ಆರು ಜನ ಹಮಾಲಿಗಳು ಎರಡು ಟಾಟಾ ಎಸಿ ವಾಹನಗಳು ಹಾಗೂ ಎರಡು ಗುಜರಾತ್ ಮೂಲದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಹಮಾಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಒಬ್ಬ ಚಾಲಕ ಮತ್ತು 5 ಹಮಾಲಿಗಳು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ವಿಚಾರಣೆ ವೇಳೆ ಸದರಿ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ತಯಾರಿ ಮಾಡುತ್ತಿರುವುದಾಗಿ ಗುಜರಾತ್ ಮೂಲದ ಚಾಲಕ ಹೇಳಿದ್ದಾನೆ.
ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಕರೆಸಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ಸಹ ಬಳ್ಳಾರಿ ನಗರದ ಲಾಲಾ ಕಮಾನ್ ನಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಪಡಿತರ ಅಕ್ಕಿಯ ಸಾಗಾಣೆಯ ದಂಧೆ ಕೊರರಿಗೆ ಬಿಸಿ ಮುಟ್ಟಿಸಿದ್ದರು. ಅಲ್ಲದೆ ಹಗರಿ ನದಿಯಿಂದ ಅಕ್ರಮವಾಗಿ ಎತ್ತಿನಬಂಡಿಗಳಲ್ಲಿ ಮರಳು ಸಾಗಾಸುವ ದಂಧೆ ಮೇಲೂ ರಾಜೇಶ್ ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು.
ಮಧ್ಯರಾತ್ರಿಯ ಇವರ ಒಂಟಿ ಕಾರ್ಯಚರಣೆಯನ್ನು ನಗರದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


