ಬಳ್ಳಾರಿ,ಜ,17 : ನಗರದ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸರಕು ಸಾಗಣೆ ನಡೆಯುತ್ತಿರುವುದರ ವಿರುದ್ಧ ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಸಿದ್ದೇಶ್ ಊಳೂರು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಲವು ಸಂಘಟನೆಗಳ ಮುಖಂಡರ ಜೊತೆಗೆ ಮನವಿ ಸಲ್ಲಿಸಿದ ಅವರು, ಖಾಸಗಿ ಟ್ರಾನ್ಸ್ಪೋರ್ಟ್, ಆಟೋ, ಕಾರು ಸೇರಿದಂತೆ ವಿವಿಧ ವಾಹನಗಳ ಮೂಲಕ ಯಾವುದೇ ಪರಿಶೀಲನೆ ಇಲ್ಲದೆ ಸರಕುಗಳನ್ನು ಬಸ್ ನಿಲ್ದಾಣದೊಳಗೆ ತಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ)ಯ ಅಧಿಕೃತ ಅನುಮತಿ ಇಲ್ಲದೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಸ್ ನಿಲ್ದಾಣದೊಳಗೆ ಸಾಮಾನ್ಯ ವಾಹನಗಳಿಗೆ ದಂಡ ವಿಧಿಸುವ ಅಧಿಕಾರಿಗಳು, ಅಪಾಯಕಾರಿ ಹಾಗೂ ಅನಧಿಕೃತ ಸರಕು ಸಾಗಣೆಯತ್ತ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು. ಸರಕುಗಳ ಪರಿಶೀಲನೆ ಇಲ್ಲದಿರುವುದು ಭದ್ರತಾ ದೃಷ್ಟಿಯಿಂದ ಭಾರೀ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಗಮನ ಸೆಳೆದರೂ, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಅಕ್ರಮ ಸಾಗಣೆ ನಡೆಯುತ್ತಿರುವುದರಿಂದ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಅನಧಿಕೃತ ಸಾಗಣೆ ನಡೆಸುತ್ತಿರುವವರ ವಿರುದ್ಧ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಮನವಿ ನೀಡಿದ ಸಂದರ್ಭದಲ್ಲಿ ಉಪ್ಪಾರ್ ಮಲ್ಲಪ್ಪ, ತಿರುಮಲ, ಶಿವಶಂಕರ್, ರಾಜಶೇಖರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.


