ಬಳ್ಳಾರಿ, ಜ.16: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ಪ್ರತಾಪ್ ರೆಡ್ಡಿಯವರ ಭೂ ಹಗರಣಗಳ ಕುರಿತು ನ್ಯಾಯಾಂಗ ತನಿಖೆ ನಡೆಸಿ, ಬಡವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಕರಿಯಪ್ಪ ಗುಡಿಮಣಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂ.715ರ ಇನಾಂ ಭೂಮಿಯನ್ನು 1970ರ ದಶಕದಲ್ಲೇ ಭೂ ನ್ಯಾಯ ಮಂಡಳಿ ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಮಂಜೂರು ಮಾಡಿದ್ದು, ಎಲ್ಲಾ ಮೂಲ ದಾಖಲೆಗಳು ಬಡವರ ಪರವಾಗಿಯೇ ಇವೆ ಎಂದು ತಿಳಿಸಿದರು.
2003ರಿಂದ ಎನ್. ಪ್ರತಾಪ್ ರೆಡ್ಡಿಯವರು ಗೂಂಡಾಗಿರಿ, ಬೆದರಿಕೆ ಹಾಗೂ ದೌರ್ಜನ್ಯಗಳ ಮೂಲಕ ರೈತರನ್ನು ಭೂಮಿಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನ್ಯಾಯಾಲಯದ ಸ್ಟೇ ಇದ್ದರೂ ಸಹ ಕೋರ್ಟ್ ಆದೇಶವಿಲ್ಲದೆ ಭೂಮಿಗಳ ಗಡಿ ಗುರುತು ನಾಶಪಡಿಸಲಾಗಿದೆ ಜೇಸಿಬಿಗಳಿಂದ ಒತ್ತುವರಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್. ಪ್ರತಾಪ್ ರೆಡ್ಡಿ ಹಾಗೂ ಅವರ ಸಹಚರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಪೂರ್ಣ ತನಿಖೆ ನಡೆಸಬೇಕೆಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಅವರು ಆಗ್ರಹಿಸಿದ್ದು ಇಲ್ಲವಾದಲ್ಲಿ ಸಿಬಿಐಗೆ ವಹಿಸಲಿ ಎಂದು ಅಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಹೇಶ್, ಗೋಪಿ, ಕುಮಾರ್ ಸಮಠಲ್, ಮೋಹನ್ ಧಾರದಮಿಲ್, ವೀರೇಶ್, ಸಿದ್ದರಾಜು ಸೇರಿದಂತೆ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.


