ಗಂಗಾವತಿ ಡಿ 27.,:- ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಹಾವಾಕ್ಯದೊಂದಿಗೆ ಗಂಗಾವತಿಯ ಕಾಯಕಯೋಗಿಗಳು, ತ್ರಿಕಾಲಜ್ಞಾನಿಗಳು, ತಪೋನಿಷ್ಠರು ಹಾಗೂ ದಾಸೋಹಮೂರ್ತಿಗಳಾದ ಶ್ರೀ ಗುರು ಚನ್ನಬಸವ ಶಿವಯೋಗಿಗಳವರ 80ನೇ ಮಹಾರಥೋತ್ಸವ ಹಾಗೂ ತಾತನ ಜಾತ್ರೆ ಡಿಸೆಂಬರ್ 28 ರಿಂದ ಜನವರಿ 4 ರವರೆಗೆ ಭಕ್ತಿಭಾವದಿಂದ ನಡೆಯಲಿದೆ.
ಕಾರ್ಯಕ್ರಮಗಳ ವಿವರ: 28 ಸಂಜೆ 5ಕ್ಕೆ ತೇರಿಗೆ ಕಳಸಾರೋಹಣ, 6ಕ್ಕೆ ಬೆಳ್ಳಿ ರಥೋತ್ಸವ, ಹಾಗೂ 7ಕ್ಕೆ ಉತ್ಸವ ಭಜನೆ. 29 ಸಂಜೆ 7ಕ್ಕೆ ದಶಮಿ ದಿಂಡಿನ ಉತ್ಸವ. 30 ರಾತ್ರಿ 7ಕ್ಕೆ ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ. 31
ಸಂಜೆ 7ಕ್ಕೆ ಪುರಾಣ ಮಹಾಮಂಗಲ ಹಾಗೂ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಲಿದೆ. ಜನವರಿ 01 ರಂದು ಪುಷ್ಯ ಶುದ್ಧ ತ್ರಯೋದಶಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗುರು ಚನ್ನಬಸವ ಮಹಾಶಿವಯೋಗಿಗಳ ತಾತನವರ ಕರ್ತೃ ಗದ್ದುಗೆ ಹಾಗೂ ಶ್ರೀ ಮಲ್ಲಿಕಾರ್ಜುನ ಲಿಂಗಕ್ಕೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಲಿದೆ. ಸಹಸ್ರಾರು ಭಕ್ತರಿಂದ ದೀರ್ಘದಂಡ ನಮಸ್ಕಾರ ನಡೆಯಲಿದೆ.
ಬೆಳಿಗ್ಗೆ 7ಕ್ಕೆ ಶ್ರೀಮಠದಿಂದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಗಂಗೆ ಸ್ಥಳಕ್ಕೆ ತೆರಳಿ ಮರಳುವ ಕಾರ್ಯಕ್ರಮ, ಬೆಳಿಗ್ಗೆ 9-20ಕ್ಕೆ ಪುನಃ ಪುರಾಣಾರಂಭ, 9-30ಕ್ಕೆ ತೇರಿನ ಪೂಜಾ ಹಾಗೂ ಪಟ ಏರಿಸುವುದು, ಬಲಿ ಅನ್ನಪ್ರೋಕ್ಷಣೆ ನಡೆಯಲಿದೆ.
ಬೆಳಿಗ್ಗೆ 11-15ಕ್ಕೆ ಮಡಿರಥೋತ್ಸವ ನಂತರ ಮಹಾಪ್ರಸಾದ, ಸಂಜೆ 4ಕ್ಕೆ ಸರ್ವಾಲಂಕೃತ ಜೋಡು ಮಹಾರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ನಡೆಯಲಿದೆ.
ಸಂಜೆ 7ಕ್ಕೆ ವೇ.ಮೂ. ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಇವರಿಂದ ಶಿವಕೀರ್ತನೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಜ.02 ರಂದು ನಟರಾಜ ಕಲಾಮಂದಿರ, ಗಂಗಾವತಿ ಇವರಿಂದ ಭರತನಾಟ್ಯ. 03 ಅಖಿಲ ಭಾರತ ವೀರಶೈವ ಮಹಿಳಾ ಘಟಕ, ಗಂಗಾವತಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ. 04 ಪ್ರತಿಭಾ ಕಲಾಕೇಂದ್ರ, ಗಂಗಾವತಿ ಇವರಿಂದ ಭರತನಾಟ್ಯ ಕಾರ್ಯಕ್ರಮ.
ವಿಶೇಷ ಸೂಚನೆ: ತೇರಿಗೆ ಬಾಳೆಹಣ್ಣಿನ ಬದಲಾಗಿ ಉತ್ತತ್ತಿಗಳನ್ನು ಅರ್ಪಿಸಬೇಕಿದ್ದು, ಸಂಜೆ 4 ಗಂಟೆಯೊಳಗಾಗಿ ತೇರಿಗೆ ಹೂವಿನ ಹಾರ ತರುವಂತೆ ಆಯೋಜಕರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾರಥೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಮಠದ ವತಿಯಿಂದ ಕೋರಲಾಗಿದೆ.


