ಅಥಣಿ:ಅಥಣಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಆರೋಗ್ಯ ಸೇವೆಗಳಿಗಾಗಿ ರಾಜ್ಯದ ಮೊದಲ ಹತ್ತು ಆಸ್ಪತ್ರೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿಯ ಸರಕಾರಿ ಆಸ್ಪತ್ರೆಯಲ್ಲಿ ಪುರಸಭೆ ಅನುದಾನದಲ್ಲಿ ನಿರ್ಮಾಣಗೊಂಡ ಶುದ್ಧ ನೀರಿನ ಘಟಕ ಹಾಗೂ ಪಲ್ಸ ಪೊಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸರಕಾರಿ ಆಸ್ಪತ್ರೆ ಆವರಣದಲ್ಲಿ 10 ಲಕ್ಷ ಅನುದಾನದ ಪತ್ರಾಸ್ ಶೆಡ್ಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ನಮ್ಮ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತಾಗಿ ವೈದ್ಯಕೀಯ ಸೇವೆ ಲಭ್ಯವಾಗುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದ ಅವರು ಈ ಆಸ್ಪತ್ರೆ ಪಕ್ಕದಲ್ಲಿಯೇ 21.29 ಕೋಟಿ ರೂ.ಗಳ ಅನುದಾನದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿಯೂ ಕೂಡ ಪ್ರಗತಿಯಲ್ಲಿದೆ ಎಂದರು.
ತಾಲೂಕಿನ 9 ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಆರೋಗ್ಯ ಇಲಾಖೆ ಅನುಮತಿ ನೀಡಿದ್ದು, ಇಷ್ಟರಲ್ಲಿಯೇ ಈ ಎಲ್ಲ ಆರೋಗ್ಯ ಕೇಂದ್ರಗಳಿಗೆ ಮತ್ತು ತಾಲೂಕಿನ ತಂಗಡಿ ಗ್ರಾಮಕ್ಕೆ 3 ಕೋಟಿ ಅನುದಾನದಲ್ಲಿ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಕೂಡ ನೆರವೇರಿಸಲಾಗುವುದು ಎಂದರು.
ಭಾರತದಲ್ಲಿ ಪಲ್ಸ ಪೊಲಿಯೋ ಇಲ್ಲ ಆದರೂ ಕೂಡ ಪಕ್ಕದ ಬಾಂಗ್ಲಾ ದೇಶ ಮತ್ತು ಪಾಕಿಸ್ತಾನದಲ್ಲಿ ಈ ರೋಗ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಭಾರತ ಸರಕಾರ ಈ ಕಾರ್ಯಕ್ರಮ ಮುನ್ನಡೆಸಿಕೊಂಡು ಬಂದಿದೆ ಎಂದರು.
ಪಲ್ಸ ಪೊಲಿಯೋ ಕಾರ್ಯದಲ್ಲಿ ಪಾಲ್ಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆಹಾರ ವ್ಯವಸ್ಥೆ ಮಾಡಿರುವ ನ್ಯಾಯವಾದಿ ಕೆ.ಎ.ವಣಜೋಳ, ರೋಟರಿ ಕ್ಲಬ್ ಅಧ್ಯಕ್ಷ ಸಚೀನ್ ದೇಸಾಯಿ ಮತ್ತು ಲೋಕೋಪಯೋಗಿ ಇಲಾಖೆಯ ಕಾಮಕರ ಇವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲೇಶ ಹುದ್ದಾರ,ಸಂತೋಷ ಸಾವಡಕರ, ವಿಲೀನರಾಜ ಯಳಮೇಲಿ, ಪ್ರಮೋದ ಬಿಳ್ಳೂರ, ರಾಜಶೇಖರ ಗುಡೋಡಗಿ, ರಿಯಾಜ ಸನದಿ, ಮಲ್ಲಿಕಾರ್ಜುನ ಬುಟಾಳಿ, ರವಿ ಬಡಕಂಬಿ, ಉದಯ ಸೋಳಸಿ, ನರಸು ಬಡಕಂಬಿ,ಬಸವರಾಜ ನಾಯಿಕ, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಧುರೀಣರಾದ ಕಲ್ಲಪ್ಪ ವಣಜೋಳ ಅರುಣ ಯಲಗುದ್ರಿ, ಪ್ರದೀಪ ನಂದಗಾಂವ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ,ಆಶಿಫ ತಾಂಬೋಳಿ, ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


