ಹುನಗುಂದ: ನವ ಜೋಡಿಗಳು ಬದುಕಿನಲ್ಲಿ ಬರುವ ಕ? ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನೆಡೆದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.
ತಾಲ್ಲೂಕಿನ ವೀರಾಪೂರ ಗ್ರಾಮದ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ ಗ್ರಾಮದ ಶಕ್ತಿ ದೇವತೆ ಲಕ್ಕಮ್ಮದೇವೆ ಪೂಜ್ಯರ ಹಾಗೂ ಗುರು-ಹಿರಿಯರ ಆಶೀರ್ವಾದದೊಂದಿಗೆ ವಿವಾಹ ಆಗುತ್ತಿರುವ ವಧು- ವರರು ಪುಣ್ಯವಂತರು. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕು ಎಂದರು.
ಗುರಗುಂಟಾದ ಚರಮೂರ್ತೆಶ್ವರ ಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವ ಗ್ರಾಮಸ್ಥರ ಕಾರ್ಯ ಶ್ಲಾಘನಿಯ. ನವ ವಧು ಅತ್ತೆ-ಮಾವಂದಿರನ್ನು ತಮ್ಮ ತಂದೆ- ತಾಯಿಯಂತೆ ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ಬನ್ನಿಹಟ್ಟಿಯ ಅಯ್ಯಪ್ಪಯ್ಯ ಸಾರಂಗಮಠ ಮಾತನಾಡಿದರು. ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬಾದ್ಮಿನಾಳ ಕನಕಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಸರೂರಿನ ಸಿದ್ದಯ್ಯ ಗುರುವಿನ, ರಾಯಪ್ಪ ಹಾದಿಮನಿ, ಪ್ರವಚನಕಾರ ವೀರಯ್ಯ-ಶಾಸ್ತ್ರಿ ಹಿರೇಮಠ, ರಾಮಣ್ಣ ಹಿರೇಮನಿ, ಬಸವರಾಜ ವಾಲಿಕಾರ, ಸಂಗಯ್ಯ ಜಂಗಮದ, ಫಕೀರಪ್ಪ ರಾಮವಾಡಗಿ, ಮಹಾಂತೇಶ ವಡಗೇರಿ, ಸೋಮಶೇಖರ ವನಂಜಕರ ಇದ್ದರು.


