ಬಳ್ಳಾರಿ. ಅ. 27: ನಗರದಿಂದ ಬೊಮ್ಮನಾಳ ಕಡೆಗೆ ಹೋಗುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಗುಂಡಿಗಳು ಬಿದ್ದಿದ್ದವು. ಈ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯಾಗಲಿ ಅಥವಾ ಗ್ರಾಮೀಣ ರಸ್ತೆ ನಿರ್ಮಾಣ ಸಂಸ್ಥೆಯಾಗಲಿ ಮುಂದಾಗಲಿಲ್ಲ. ಈ ಗುಂಡಿಗಳಲ್ಲಿ ಎಳುತ್ತಾ ಬೀಳುತ್ತಾ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಬಸ್ ಮತ್ತು ಕಾರುಗಳ ಚಾಲಕರು ಪಿಡಬ್ಲ್ಯೂ ಡಿ ಇಲಾಖೆಯ ಅಧಿಕಾರಿಗಳನ್ನು ಶಪಿಸುತ್ತಾ ತಗ್ಗು ಗುಂಡಿಗಳಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಕೆಲವು ದ್ವಿಚಕ್ರ ವಾಹನ ಸವಾರರು ಈ ಗುಂಡಿಗಳಲ್ಲಿ ಬಿದ್ದು ಕೈಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದು ಉಂಟು. ಈ ರಸ್ತೆಯಲ್ಲಿ ಹಲವಾರು ಸಲ ಜನಪ್ರತಿನಿಧಿಗಳು ಓಡಾಡುತ್ತಿದ್ದರು ಸಹ ಕಂಡು ಕಾಣದಂತೆ ಸಂಚರಿಸುತ್ತಿದ್ದರು. ಗ್ರಾಮೀಣ ಕ್ಷೇತ್ರದ ಶಾಸಕರಾದ ಬಿ ನಾಗೇಂದ್ರ ಅವರು ಈ ಕಡೆ ಸುಳಿಯದೆ ತಮ್ಮ ಮಂತ್ರಿ ಗಿರಿಗಾಗಿ ಹೈವೇ ರಸ್ತೆಗಳಲ್ಲಿ ಬೆಂಗಳೂರನ್ನು ಸುತ್ತುತ್ತಿದ್ದರು. ಇಂಥ ಹೈಟೆಕ್ ಮನುಷ್ಯರಿಗೆ ಗ್ರಾಮೀಣ ಪ್ರದೇಶದ ಗೋಳು ಹೇಗೆ ಅರ್ಥವಾಗಬೇಕು.
ಇದನ್ನು ಮನಗಂಡ ಜೆ ಎಸ್ ಡಬ್ಲ್ಯೂ ಸಂಸ್ಥೆಯವರು ನಿನ್ನೆ ದಿನ ಕಂಪನಿಯ ವಾಹನಗಳಲ್ಲಿ ಕಾರ್ಖಾನೆಯಲ್ಲಿ ಲಭ್ಯವಿರುವ ಕಲ್ಲು ಮಣ್ಣುಗಳನ್ನು ತಂದು ಸುಮಾರು ಐದಾರು ಅಡಿ ಅಗಲದ ಒಂದೆರಡು ಅಡಿ ಆಳದ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಒಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಸರ್ಕಾರ ಡಿಪಿಆರ್ ಸಿದ್ದಪಡಿಸಿದ್ದು ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಒಂದೆರಡು ತಿಂಗಳುಗಳ ಕಾಲ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಜೆ ಎಸ್ ಡಬ್ಲ್ಯೂ ಕಾರ್ಖಾನೆಯ ಅಧಿಕಾರಿಗಳು ಈ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಾರ್ಖಾನೆಯ ಈ ಕೆಲಸಕ್ಕೆ ವಾಹನ ಸವಾರರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


