ಹಸಿರು ಕ್ರಾಂತಿ ವರದಿ, ಜಮಖಂಡಿ; ಆಧ್ಯಾತ್ಮದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಸುಖಮಯ ಜೀವನಕ್ಕೆ ಆಧ್ಯಾತ್ಮ ಅತಿಅವಶ್ಯವಾಗಿದೆ. ನಿತ್ಯಜೀವನದ ಜಂಜಾಟ ದಿಂದ ಹೊರಬಂದು ಕೆಲ ಸಮಯ ಆಧ್ಯಾತ್ಮದತ್ತ ಒಲವು ತೊರಬೇಕು ಎಂದು ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಸಂಚಾಲಕ ಪಂ.ಪ್ರಮೊದಾಚಾರ್ಯ ಪೂಜಾರ ತಿಳಿಸಿದರು. ಭಾನುವಾರ ನಗರದ ದ್ವಾರಕಾನಾಥ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಲಯವು ಹರಿದಾಸರ ಹಾಗೂ ಅವರ ಕೃತಿಗಳ ಪರಿಚಯ ಮತ್ತು ಸಮಜಾದಲ್ಲಿ ಧಾರ್ಮಿಕ ಮನೊಭಾವನೆ ತುಂಬುವ ಕೆಲಸ ಮಾಡುತ್ತಿದೆ. ದೇಶ ವಿದೇಶಗಳ ಅನೇಕ ಜನ ಆಸ್ತಿಕರು ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿರುವದು ಸಂತಸದ ಸಂಗತಿಯಾಗಿದೆ. ಯಾವುದೇ ಬೇಧವಿಲ್ಲದೇ ಸ್ತ್ರೀ, ಪುರುಷರು ದಾಸ ಸಾಹಿತ್ಯದ ಅಧ್ಯಯನ ಮಾಡಬಹುದು ಎಂದು ಹೇಳಿದರು. ಪ್ರತಿ ವರ್ಷ ಸುಮಾರು 30ರಿಂದ 40 ಸಾವಿರ ಜನ ಪರೀಕ್ಷೆಗೆ ಕುಳಿತು ದಾಸ ಸಾಹಿತ್ಯದ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ ಎಂದುತಿಳಿಸಿದರು.
ಪಂ. ರಂಗಾಚಾರ್ಯ ಜೋಷಿ ಮಾತನಾಡಿ, ಸನಾತನ ಧರ್ಮದ ಅತ್ಯಮೂಲ್ಯ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತ, ವೇದಗಳು, ಉಪನಿಷತ್ತುಗಳ ಸಾರವನ್ನು ಹರಿದಾಸರು ತಮ್ಮ ಕೃತಿಗಳಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಾರೆ. ಅವುಗಳ ಅಧ್ಯಯನ, ಪಾರಾಯಣ ದಿಂದ ಧಾರ್ಮಿಕತೆ ಬೆಳೆದು, ನೆಮ್ಮದಿಗೂ ಕಾರಣವಾಗುತ್ತದೆ ಅದಕ್ಕಾಗಿಯೇ ಸೌರಭ ದಾಸ ಸಾಹಿತ್ಯವಿದ್ಯಾಲಯವನ್ನು ಉತ್ತರಾಧಿಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು ಸ್ಥಾಪಿಸಿದ್ದಾರೆ, ಕಳೆದ 9 ವರ್ಷಗಳಿಂದ ಧರ್ಮಜಾಗೃತಿಯ ಕೆಲಸ ನಡೆದಿದೆ ಎಂದು ಹೇಳಿದರು. ಉಡುಪಿಯ ಅಷ್ಟಮಠಾಧೀಶರು ಸೇರಿದಂತೆ ಉಳಿದೆಲ್ಲ ಮಾಧ್ವ ಮಠದ ಯತಿಗಳು ವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಉತ್ತೇಜನ ಪ್ರೊತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು. ಸುಜಯಿಂದ್ರಾಚಾರ್ಯ ಮನಗೂಳಿ ಮಾತನಾಡಿದರು. ಸನ್ಮಾನ- ಅಲಕನಂದಾ ಗೋ.ಹುಲ್ಯಾಲಕರ, ವಾದಿರಾಜ ಕುಲಕರ್ಣಿ,ಶಕುತಾಯಿ ಗಲಗಲಿ, ಶ್ರೀದೇವಿ ಕುಲಕರ್ಣಿ, ರಮಾವೈದ್ಯ ಅವರನ್ನು ಸನ್ಮಾನಿಸಲಾಯಿತು. ಸೌಮ್ಯಾ ನಾಮಣ್ಣವರ, ಲಕ್ಷ್ಮೀ ಕುಲಕರ್ಣಿ,ಅವರು ಗಮಕ ಕಾವ್ಯವಾಚನ ಮಾಡಿದರು. ಹುನ್ನೂರಿನ ಬಾಲಕಿಯರು ನೃತ್ಯ ಪ್ರದರ್ಶನ ಮಾಡಿದರು.
ಕಿರು ರೂಪಕ- ಪ್ರಸನ್ನವೆಂಕಟದಾಸರ ಕುರಿತು ಕಿರು ರೂಪಕವನ್ನು ಪ್ರದರ್ಶಿಸಲಾಯಿತು. ಮಂಗಲಾ ಕೊಡಗಲಿ ವೆಂಕಟದಾಸರಾಗಿ, ಅಣ್ಣನ ಪಾತ್ರದಲ್ಲಿ ಅಶ್ವಿನಿ ಟೊಣಪಿ, ಅತ್ತಿಗೆ ಪಾತ್ರದಲ್ಲಿ ರಮಾವೈದ್ಯ, ವೆಂಕಟೇಶನ ಪಾತ್ರದಲ್ಲಿ ಪ್ರಜ್ಞಾ ಹುಲ್ಯಾಳಕರ, ಕಾರಕೂನನ ಪಾತ್ರದಲ್ಲಿ ಸ್ನೇಹಾ ಕುಲಕರ್ಣಿ, ಅಭಿನಯಿಸಿದರು. ಅಕ್ಷರಾ ಕೊಡಗಲಿ ಹಾಗೂ ವಿದ್ಯಾಲಯದ ಸದಸ್ಯರು ಯಾತ್ರಿಕರ ಪಾತ್ರದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಅರ್ಚಕ ಅಚ್ಚುತರಾವ ಬಿಚಗತ್ತಿ, ರಾಜೇಂದ್ರ ಹುಲ್ಯಾಳಕರ ವೇದಿಕೆಯಲ್ಲಿದ್ದರು. ಪಲ್ಲವಿ ಕುಲಕರ್ಣಿ ಸ್ವಾಗತಕೊರಿದರು. ಕವಿತಾ ಕಪಿಲೇಶ್ವರ ಕಾರ್ಯಕ್ರಮ ನಿರೂಪಿಸಿದರು. ರಾಜಶ್ರೀ ಹುಲ್ಯಾಳಕರ ವಂದಿಸಿದರು.


