ಅಥಣಿ: ಯಾವುದೇ ಒಂದು ರಾಷ್ಟ್ರ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಇಂಜಿನಿಯರ ಅವರ ಕಾರ್ಯ, ಕೊಡುಗೆ ಅಪಾರವಾಗಿದೆ. ದೇಶಕಂಡ ಅಪರೂಪದ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಬಹಳ ಅಮೂಲ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ರಾಯಲ್ ಸಭಾಂಗಣದಲ್ಲಿ ಅಥಣಿ ತಾಲೂಕಾ ಅಭಿಯಂತರ ಹಾಗೂ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಮೂಲಸೌಕರ್ಯಗಳ ಅಭಿವೃದ್ಧಿ, ಜೀವನ ಮಟ್ಟ ಸುಧಾರಣೆ, ಸಮಾಜಿಕ್ಕೆ ಸವಾಲುಗಳಿಗೆ ಪರಿಹಾರ, ಹೊಸ ತಂತ್ರಜ್ಞಾನಗಳ ಅಳವಡಿಕೆ, ಆರ್ಥಿಕ ಅಭಿವೃದ್ಧಿ, ಯೋಜನೆಗಳ ವಿನ್ಯಾಸ, ಸಂಶೋಧನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಇಂಜಿನಿಯರ್ ಗಳು ದೇಶಕ್ಕೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಅಭಿಯಂತರರು ದೂರದೃಷ್ಟಿ, ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಹೊಂದಿರಬೇಕು. ಸರ್ ಎಂ ವಿಶ್ವೇಶ್ವರಯ್ಯನವರ ವಿಚಾರಧಾರೆಗಳು ನಿಮ್ಮೆಲ್ಲರಿಗೆ ಆದರ್ಶವಾಗಬೇಕು.
ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇಂದಿನ ಇಂಜಿನಿಯರುಗಳು ಕೆಲಸ ನಿರ್ವಹಿಸಬೇಕಾಗಿದೆ. ಇತ್ತೀಚಿಗೆ ಎ ಐ ಟೆಕ್ನಾಲಜಿ ಬಂದಿರುವುದರಿಂದ ಬಹಳಷ್ಟು ಸಮಯ ಮತ್ತು ಖರ್ಚು ವೆಚ್ಚ ಕಡಿಮೆಯಾಗುತ್ತದೆ. ಇದು ಎಲ್ಲಾ ವಲಯಗಳಲ್ಲಿ ಮುಂದಿನ ದಿನಮಾನಗಳಲ್ಲಿ ಬರಲಿದ್ದು, ನಮ್ಮ ತಾಲೂಕಿನ ಅಭಿಯಂತರರು ಹೊಸ ತಂತ್ರಜ್ಞಾನಗಳ ಅನುಭವ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ಉಪನ್ಯಾಸಕ ಡಾ. ಅನಿಕೇತ ಕಟವಾರೆ ಮಾತನಾಡಿ ಸರ್ ಎಂ. ವಿಶ್ವೇಶ್ವರಯ್ಯನವರದು ದೂರದೃಷ್ಟಿಯ ಮೇರು ವ್ಯಕ್ತಿತ್ವ. ಶ್ರೇಷ್ಟ ಇಂಜಿನಿಯರಾಗಿ, ಆರ್ಥಿಕ ಚಿಂತಕರಾಗಿ, ತತ್ವಜ್ಞಾನಿಯಾಗಿ ರಾಷ್ಟ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದರಿಂದಲೇ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಹಾಕಿಕೊಟ್ಟ ಯೋಜನಾ ಮಾರ್ಗ ದಲ್ಲಿ ಸಾಗಿದ್ದರೆ ಬಡತನ, ನಿರುದ್ಯೋಗದoತಹ ಜ್ವಲಂತ ಸಮಸ್ಯೆಗಳು ನಿರ್ಮೂಲನೆಯಾಗುತ್ತವೆ. ಹಿಂದಿನ ಕಾಲದ ಇಂಜಿನಿಯರ ಕಾರ್ಯ ಮತ್ತು ಈಗಿನ ಇಂಜಿನಿಯರ್ ಗಳ ಕಾರ್ಯದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತೇವೆ. ಹೊಸ ಹೊಸ ತಂತ್ರಜ್ಞಾನಗಳನ್ನ ಅರಿತು ಅವುಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಎಂದ ಅವರು ಇಂಜಿನರಿಗಳಿಗೆ ಅನೇಕ ಸಲಹೆಗಳನ್ನ ನೀಡಿದರು.
ಹೆಸ್ಕಾಂ ಕಚೇರಿಯ ಜಿ. ವಿ ಸಂಪಣ್ಣವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಥಣಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್ ಗಳಿಗೆ 2025 ನೇ ಸಾಲಿನ ಅತ್ಯುತ್ತಮ ಇಂಜಿನಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ನಿವೃತ್ತ ಇಂಜಿನಿಯರ್ ಗಳಿಗೆ, ವಿಶೇಷ ಸೇವೆ ಸಲ್ಲಿಸಿದ ಇಂಜಿನಿಯರ್ ಗಳಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಚಿಕ್ಕೋಡಿಯ ಹಿರಿಯ ಅಭಿಯಂತರ ನಾಗರಾಜ್ ಬಿ. ಎ ಅಭಿಯಂತರ ರಾಜಶೇಖರ ಟೋಪಗಿ, ನೀರಾವರಿ ಯೋಜನೆಯ ಮುಖ್ಯ ಅಭಿಯಂತರು ಪ್ರವೀಣ ಹುಣಸಿಕಟ್ಟಿ, ಸಂಘದ ಕಾರ್ಯದರ್ಶಿ ರಾಜು ಆಲಬಾಳ, ವೀರಣ್ಣ ವಾಲಿ, ಶ್ರೀಕಾಂತ್ ಮಾಕಾಣಿ, ಎಸ್. ಆರ್ ಗೋಳಪ್ಪನವರ, ರವೀಂದ್ರ ಮುರುಗಾಲಿ, ಜಗದೀಶ್ ಹಿರೇಮಠ, ಶಿವಲಿಂಗ ಗಲಗಲಿ, ಮಲ್ಲಿಕಾರ್ಜುನ ಮಗದುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಅಭಿಯಂತರ ಗುರುಸ್ವಾಮಿ ಸ್ವಾಗತಿಸಿದರು. ಸಂಗಮೇಶ ಹಚ್ಚಡದ ನಿರೂಪಿಸಿದರು. ಸಂಗಮೇಶ ಬುಕೀಟಗಾರ ವಂದಿಸಿದರು.


