ಜಮಖಂಡಿ: ಮೇಲ್ವರ್ಗದ ಜನರು ತಳಸಮುದಾಯದ ಜನರಿಗೆ ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಿದ್ದರ ವಿರುದ್ಧ ೧೨ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಭಟಿಸಲಿಲ್ಲ. ಬದಲಾಗಿ ದೇಹವೇ ದೇಗುಲ, ಆತ್ಮವೇ ದೇವರು ಎಂಬ ಶರಣ ಸಿದ್ಧಾಂತದ ತಿಳಿವಳಿಕೆ ನೀಡಿ ಧೈರ್ಯ ತುಂಬಿದ್ದರು ಎಂದು ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ತಾಲ್ಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾರವ್ವಗೌಡ್ತಿ ಬಿರಾದಾರ ಹಾಗೂ ಸಾತವೀರಯ್ಯ ಅಕ್ಕಿ ಅವರ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಶರಣ ಸಿದ್ಧಾಂತ ಕುರಿತು ವಿಶೇಷುಪನ್ಯಾಸ ನೀಡಿದರು.
ಒಳ್ಳೆಯ ವಿಚಾರ ಮತ್ತು ವೈಚಾರಿಕ ಚಿಂತನೆಯಿAದ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬ ವಿಶ್ವಾದಿಂದ ಅನುಭವ ಮಂಟಪ ನಿರ್ಮಿಸಿ ಎಲ್ಲ ವರ್ಗದ ಶರಣ-ಶರಣೆಯರಿಗೆ ಅನುಭವ ಹಂಚಿಕೊಳ್ಳಲು ಬಸವಣ್ಣನವರು ಅವಕಾಶ ಮಾಡಿಕೊಟ್ಟಿದ್ದರು. ಸಮಾಜಕ್ಕಾಗಿ ತಮ್ಮ ಕುಲವನ್ನು ತ್ಯಜಿಸಿ ರಾಜಪ್ರಭುತ್ವವನ್ನು ಎದುರು ಹಾಕಿಕೊಂಡಿದ್ದರು ಎಂದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಹುಟ್ಟಿದ ಊರಿನಲ್ಲಿ ಬದುಕು ಕಟ್ಟಿಕೊಳ್ಳಲು ಆಗದಿದ್ದರೆ ಜಗತ್ತಿನ ಯಾವ ಮೂಲೆಯಲ್ಲೂ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಎಷ್ಟೇ ಎತ್ತರಕ್ಕೆ ಬೆಳೆದು ಎಲ್ಲಿಯೇ ನೆಲೆಸಿದ್ದರೂ ಹುಟ್ಟಿದ ಊರಿನಲ್ಲಿಯೇ ಮೂಲ ಬೇರುಗಳು ಇರಬೇಕು ಎಂಬುದನ್ನು ತಾರವ್ವಗೌಡ್ತಿ ಬಿರಾದಾರ ಅವರ ಬದುಕಿನಿಂದ ಕಲಿಯಬೇಕಾದ ಪಾಠವಾಗಿದೆ ಎಂದರು.
ಹಿರಿಯ ವಕೀಲ ಡಾ.ಟಿ.ಪಿ. ಬಾಂಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಡಾ.ವಾದಿರಾಜ ದೇಶಪಾಂಡೆ ಮಾತನಾಡಿದರು.
ದತ್ತಿದಾನಿಗಳ ಪರವಾಗಿ ಡಾ.ಭರತ ಬಿರಾದಾರ, ಭಾಗೀರಥಿ ಅಕ್ಕಿ ಇದ್ದರು. ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಚ್. ಕಳಸಣ್ಣಿ ಹಾಗೂ ನಿವೃತ್ತ ಶಿಕ್ಷಕ ಗುರುನಾಥ ಸುತಾರ ಅವರನ್ನು ಸನ್ಮಾನಿಸಲಾಯಿತು. ಪೂಜಾ ಭಜಂತ್ರಿ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಬಿ.ಎಸ್. ಹಿರೇಮಠ ನಿರೂಪಿಸಿದರು. ಲಕ್ಷಿö್ಮÃ ಮಗದುಮ ವಂದಿಸಿದರು.