ಬೆಳಗಾವಿ, ಸೆ.19: ಇಡೀ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಮ್ಸ್ ವೈದ್ಯರ ತಂಡವು ಬಾಲಕಿಯ ಬೆನ್ನುಹುರಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿರುತ್ತದೆ.
ಸೆಪ್ಟೆಂಬರ್ 13 ನೇ ತಾರೀಕಿನ್ನಂದು ಬಿಮ್ಸ್ ಆಸ್ಪತ್ರೆ ಬೆಳಗಾವಿಯಲ್ಲಿ ಬೆನ್ನುಹುರಿ ಗಡ್ಡೆ ಚಿಕಿತ್ಸೆಗಾಗಿ ದಾಖಲಾಗಿದ್ದ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಬಸವರಾಜ ಮಾವಿನಕಟ್ಟಿ ಎಂಬಾತನ ಮಂಗಳಾದ ಲಕ್ಷ್ಮೀ ಮಾವಿನಕಟ್ಟಿಯ ಆರೋಗ್ಯ ತೀರ ಹದಗೆಟ್ಟಿತ್ತು. ಒಂದೆರಡು ದಿನಗಳು ಗಮನಿಸಿ, ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿದ ಬಿಮ್ಸ್ ನ ನರರೋಗ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ಬಸವರಾಜ್ ಬಿರಾದರ್ ಪಾಟೀಲ್ ಸೆಪ್ಟೆಂಬರ್ 15 ರಂದು ಶಸ್ತ್ರಚಕಿತ್ಸೆಗೆ ಸಮಯ ನಿಗದಿಗೊಳಿಸಿದ್ದರು.
ಅದರಂತೆ ತಜ್ಞ ವೈದ್ಯರಾದ ಡಾ.ಬಸವರಾಜ ಬಿರಾದಾರ ಪಾಟೀಲ್, ಡಾ.ಸಂಜೀವ ರಾಥೋಡ್ ಅವರು ನರ್ಸಿಂಗ್ ಸಿಬ್ಬಂದಿ ಮತ್ತು ಅನಸ್ತೇಷಿಯಾ ಸಿಬ್ಬಂದಿ ಜೊತೆಗೂಡಿ ಲಕ್ಷ್ಮೀಯ ಬೆನ್ನುಹುರಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು, ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಬಾರಿಗೆ ಇಂತಹದ್ದೊಂದು ವಿರಳ ಪ್ರಕಣವನ್ನು ಸವಾಲಾಗಿ ಕೈಗೆತ್ತಿಕೊಂಡಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞ ವೈದ್ಯರು ಅತ್ಯಾಧುನಿಕ ಪರಿಕರಗಳ ಮೂಲಕ ಸಮರ್ಪಕ ಪೂರ್ವಸಿದ್ಧತೆಯೊಂದಿಗೆ 16 ವರ್ಷದ ಬಾಲಕಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
* ಏನಿದು ಬೆನ್ನುಹುರಿ ಗಡ್ಡೆ?
ವೈದ್ಯಕೀಯ ಭಾಷೆಯಲ್ಲಿ Posterior cervical laminectomy and decompression of tumor ಎಂದು ಕರೆಯುವ ಇದನ್ನು ಜನಸಾಮಾನ್ಯರ ಭಾಷೆಯಲ್ಲಿ ಬೆನ್ನುಹುರಿ ಗಡ್ಡೆ ಎಂದು ಕರೆಯಲಾಗುತ್ತದೆ. ಸಹಜವಾಗಿ 16 ವರ್ಷದವರಲ್ಲಿ ಈ ರೀತಿಯ ಬೆನ್ನುಹುರಿ ಗಡ್ಡೆ ವಿರಳವಾಗಿ ಕಾಣಿಸುತ್ತದೆ. ಬೆನ್ನು ಹುರಿ ಗಡ್ಡೆ ಕಾಣಿಸಿಕೊಳ್ಳುವುದರಿಂದ ದೇಹ ಭಾರವಾಗುತ್ತದೆ, ಕೈಕಾಲುಗಳು ಬಲಹೀನಗೊಳ್ಳುತ್ತವೆ. ಇದರಿಂದಾಗಿ ನಡೆದಾಡಲು, ಒಂದೂ ಹೆಜ್ಜೆಯನ್ನೂ ಇಡುವುದಕ್ಕೆ ಕಷ್ಟಸಾಧ್ಯವಾಗುತ್ತದೆ
ನರರೋಗ ಶಸ್ತ್ರಚಕಿತ್ಸಾ ತಜ್ಞವೈದ್ಯರ ಸಮಯಪ್ರಜ್ಞೆ, ಜಾಗೃತೆ, ಕೌಶಲದಿಂದ ಬಾಲಕಿಯ ರೋಗ ಗುಣವಾಗಿದೆ. ಎಲ್ಲರಂತೆ ಬಾಲಕಿ ಲಕ್ಷ್ಮೀ ಕೂಡ ನಡೆದಾಡಲು ಆರಂಭಿಸಿದ್ದಾಳೆ ಈ ಮಗಳ ಚಟುವಟಿಕೆಯನ್ನು ನೋಡಿ ತಂದೆ ತಾಯಿ ಅವರ ಬಂಧು ಬಳಗದೇವರು ತುಂಬಾ ಖುಷಿಪಟ್ಟಿದ್ದಾರೆ
ವೈದ್ಯರಿಗೆ ಹಾಗೂ ತಂಡಕ್ಕೆ ಲಕ್ಷ್ಮಿಯ ಬಂಧು ಬಳಗ ಧನ್ಯವಾದಗಳು ಅರ್ಪಿಸಿದ್ದಾರೆ.
ಇಂತಹದ್ದೊಂದು ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡು ಯಶಸ್ವಿಯಾದ ನರರೋಗ ತಜ್ಞವೈದ್ಯರ ತಂಡಕ್ಕೆ ಬಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ್ ಶೆಟ್ಟಿ ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಈರಣ್ಣ ಪಲ್ಲೆದ ಅಭಿನಂದನೆ ಸಲ್ಲಿಸಿದ್ದಾರೆ.