ಬೆಳಗಾವಿ : ಕಾಂಗ್ರೆಸ್ನ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಅವರ ಸಾರ್ವಜನಿಕ ಹಿತದ ಪ್ರಶ್ನೆಗೆ ನೀಡಿದ ಅವಮಾನಕಾರಿ ಉತ್ತರವು ಅತ್ಯಂತ ಖಂಡನೀಯವಾಗಿದೆ. ಅವರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ. ಸೋನಾಲಿ ಸೋನಾಬರ್ತ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಡಾ. ಸೋನಾಲಿ ತಿಳಿಸಿರುವುದೇನೆಂದರೆ –“ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಯಾವಾಗ ನಿರ್ಮಾಣವಾಗುತ್ತದೆ?” ಎಂದು ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಕೇಳಿದ ಪ್ರಶ್ನೆಗೆ, ಆರ್.ವಿ. ದೇಶಪಾಂಡೆ ಅವರು “ನಿನ್ನ ಹೆರಿಗೆ ಆದ ಮೇಲೆ ಮಾಡಿಸುತ್ತೀನಿ” ಎಂದು ಹೇಳಿರುವುದು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಾಗಿದೆ.
ಹಿರಿಯ ಶಾಸಕರಿಂದಲೇ ಇಂತಹ ಕೀಳುಮಟ್ಟದ ಹೇಳಿಕೆ ಬರುವುದು ಕಾಂಗ್ರೆಸ್ ಸಂಸ್ಕೃತಿಯ ನಿಜ ಸ್ವರೂಪವನ್ನು ತೋರಿಸುತ್ತದೆ. ಇಂತಹ ವರ್ತನೆ ಯುವ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತದೆ. ಸಾರ್ವಜನಿಕ ಅಭಿವೃದ್ಧಿ ಸಂಬಂಧಿಸಿದ ಪ್ರಶ್ನೆಗೆ ವೈಯಕ್ತಿಕ ನಿಂದನೆ ಮಾಡುವುದೇ ದುರದೃಷ್ಟಕರ.”
ಅವರು ಮುಂದುವರೆದು –“ಆರ್.ವಿ. ದೇಶಪಾಂಡೆ ಅವರು ತಕ್ಷಣವೇ ಮಹಿಳಾ ಪತ್ರಕರ್ತೆ ಹಾಗೂ ಸಮಗ್ರ ಮಹಿಳಾ ಸಮಾಜದ ಮುಂದೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಈ ಕುರಿತು ತೀವ್ರ ಹೋರಾಟ ನಡೆಸಲು ಹಿಂಜರಿಯುವುದಿಲ್ಲ” ಎಂದು ಎಚ್ಚರಿಸಿದ್ದಾರೆ.


