ಬಳ್ಳಾರಿ, ಆ. 26 : ನಗರದಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಆಶ್ರಯದಲ್ಲಿ 26ನೇ ಗಣೇಶ ಉತ್ಸವ ಆಚರಣೆಯು ಡಾ. ರಾಜಕುಮಾರ್ ರಸ್ತೆಯ ಪಟೇಲ್ ನಗರದಲ್ಲಿ ವಿಶೇಷವಾಗಿ ನಿರ್ಮಿಸಲಾದ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಮಿತ್ರ ಮಂಡಳಿಯ ನಾಯಕ ಮತ್ತು ಮಾಜಿ ಬುಡ ಅಧ್ಯಕ್ಷ ಮಾರುತಿ ಪ್ರಸಾದ್ ತಿಳಿಸಿದರು.
ಅವರು ಮಂಟಪದ ಆವರಣದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ಶ್ರೀ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯ ನೇತೃತ್ವದಲ್ಲಿ ಗಣೇಶ ಉತ್ಸವವನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುತ್ತಿದೆ ಮತ್ತು 26ನೇ ವಾರ್ಷಿಕ ಗಣೇಶ ಉತ್ಸವವನ್ನು ಸಹ ಅದ್ದೂರಿಯಾಗಿ ಆಚರಿಸಲು ಅಗಲ ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ, ಕಳೆದ ವರ್ಷ, ಗಣೇಶ ಉತ್ಸವದ ಸಮಯದಲ್ಲಿ, ಅಯೋಧ್ಯಾ ಬಲರಾಮನ ರೂಪದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು, ಈ ಬಾರಿ ಅನಂತ ಪದ್ಮನಾಭ ರೂಪದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಕಳೆದ ಬಾರಿ ಒಂದುವರೆ ಲಕ್ಷಕ್ಕೂ ಅಧಿಕ ಜನ ಗಣೇಶನ ದರ್ಶನ ಪಡೆದಿದ್ದರೂ ಈ ಬಾರಿ 2 ಲಕ್ಷ ನೀರುವ ಸಾಧ್ಯತೆ ಇದೆ ಎಂದ ಅವರು ಆದಿಶೇಷನು ಪೂಜಿಸಿದ ಅನಂತ ಪದ್ಮನಾಭನ ನಾಭಿಯಿಂದ ಹೊರಹೊಮ್ಮಿದ ಕಮಲದಲ್ಲಿ ಬ್ರಹ್ಮ ದೇವರ ಬದಲಿಗೆ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ, ಮಂಟಪದಲ್ಲಿ ಈಗಾಗಲೇ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಮಾದರಿ ಸೆಟ್ಟಿಂಗ್ ಅನ್ನು ರಚಿಸಲಾಗುತ್ತಿದೆ, ಐದು ದಿನಗಳ ಕಾಲ ಉತ್ಸವ ನಡೆಯಲಿದೆ, ವಿಶೇಷ ಪೂಜೆಗಳ ಜೊತೆಗೆ ಪ್ರತಿದಿನ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಮತ್ತು ನಿಮಜ್ಜನ ದಿನದಂದು ಅನ್ನದಾನ ಏರ್ಪಡಿಸಲಾಗಿದೆ ಎಂದು ಮಾರುತಿ ಪ್ರಸಾದ್ ಹೇಳಿದರು.
ನಗರದ ಸಾರ್ವಜನಿಕರು ಈ ವಿಶೇಷವಾದ ಗಣೇಶೋತ್ಸವವನ್ನು ಕಣ್ತುಂಬಿಕೊಂಡು ಗಣೇಶನ ಆಶೀರ್ವಾದ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಮಿತ್ರ ಮಂಡಳಿಯ ಸದಸ್ಯರಾದ ಜಿತೇಂದ್ರ, ದೀಪಕ್, ಗೋಪಿ, ಶ್ರವಣ್ ರೆಡ್ಡಿ, ಗೋಪಾಲ್ ರೆಡ್ಡಿ, ರಾಜೇಶ್ ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.