♦ಆಗಸ್ಟ್ 27 ರಂದು ಗಣೇಶ ಚತುರ್ಥಿ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘೋಪಶಾಂತಯೇ |
ಅರ್ಥಾತ್ ಶುಭ್ರವಾದ ವಸ್ತ್ರವನ್ನು ಧರಿಸಿರುವ ಚಂದ್ರನಂತೆ ಶ್ವೇತ ಬಣ್ಣದವನಾದ ನಾಲ್ಕು ಭುಜಗಳುಳ್ಳ ಪ್ರಸನ್ನವಾದ ಮುಖವುಳ್ಳ ವಿಶ್ವಂಭರಮೂರ್ತಿ ಭಗವಂತನನ್ನು ಎಲ್ಲ ಅಡಚಣೆಗಳ ತಡೆಗಾಗಿ ಧ್ಯಾನಿಸುವೆ ಎಂದರ್ಥ.
#ಸರ್ವವ್ಯಾಪಿ, ಸರ್ವಪೂಜ್ಯ ಗಣೇಶ: ಭಾರತೀಯರ ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 27 ರಂದು “ಗಣೇಶ ಚತುರ್ಥಿಯನ್ನು” ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಬೆಳ್ಳಿ ಗಣೇಶ ಅಥವಾ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಇಟ್ಟು, ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶನು ತಿಂಡಿ ಪ್ರಿಯ, ಹಾಗಾಗಿ ಅವನಿಗೆ ಇಷ್ಟವಾಗುವ ಮೋದಕ, ಕಡಬು, ಚಕ್ಕಲಿ, ಕೋಡುಬಳೆ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ಮಾಡಿ, ನೈವೈದ್ಯಕ್ಕೆ ಇಡುತ್ತಾರೆ. ಗಣೇಶನ ಮೂರ್ತಿಯನ್ನು ಕೇವಲ ಮನೆಯಲ್ಲಿ ಮಾತ್ರವಲ್ಲ, ಶಾಲಾ-ಕಾಲೇಜು, ಕಚೇರಿಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲೂ ವಿಶೇಷ ಗಾತ್ರದ ಗಣೇಶನನ್ನು ಇಟ್ಟು ಪೂಜೆ ಮಾಡಲಾಗುತ್ತದೆ.ಹೀಗೆ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
#ಗಣೇಶನ ಜನನದ ಹಿನ್ನೆಲೆ: ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.
#ಜೇಡಿ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಣ್ಣದಿಂದ ತಯಾರಿಸಿರುವ ಗೌರಿ ಹಾಗು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಮತ್ತು ಪೂಜಿಸಿ ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೀರು ಕಲುಷಿತವಾಗಿ, ಜಲಚರಗಳಿಗೆ ಹಾನಿಯುಂಟಾಗುತ್ತದೆ. ಇದನ್ನು ತಪ್ಪಿಸಲು ಜೇಡಿ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಪರಿಸರ ಪ್ರೇಮಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿಷಕಾರಿ ರಾಸಾಯನಿಕ, ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರಿಸ್ನ ಗಣೇಶನ ಮೂರ್ತಿ ಬಳಕೆ ಮಾಡದೆ, ಸಾದಾ ಜೇಡಿ ಮಣ್ಣಿನಿಂದ ತಯಾರಿಸಿದ, ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣದಿಂದ ತಯಾರಿಸಿದ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ಹೇಗೆ ಇರಬೇಕು..? : ಪಿಓಪಿ ಅಥವಾ ಬಣ್ಣವನ್ನು ಬಳಸಿದ ಮೂರ್ತಿಗಳನ್ನು ನೇರವಾಗಿ ಹೊಂಡ,ನದಿಗಳಿಗೆ ಬಿಡದೆ ಬಕೆಟ್ನಲ್ಲಿ ವಿಸರ್ಜಿಸಬೇಕು ಅಥವಾ ಮೂರ್ತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳು ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು. ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆದು ನಂತರ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.
ಅವೈಜ್ಞಾನಿಕ ವಿಸರ್ಜನೆಯ ಪರಿಣಾಮಗಳು: ಬಾವಿ, ಕೆರೆ ಹಾಗೂ ಹೊಳೆಗಳಲ್ಲಿ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆಗಳು ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿಯನ್ನು ಸಿಡಿಸುವುದರಿಂದ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗಿ, ಪರಿಸರಕ್ಕೆ ಹಾನಿಯಾಗುತ್ತದೆ.ಈ ಎಲ್ಲಾ ತಪ್ಪುಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ಸಹಜ. ನಮ್ಮ ಪರಿಸರದಲ್ಲಿ ನಾವೇ ಉಂಟುಮಾಡಿದ ಮಾಲಿನ್ಯಗಳು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಅದಕ್ಕಾಗಿ ಆದರೂ ನಾವು ಎಚ್ಚೆತ್ತುಕೊಂಡು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು.
ಗಣೇಶ ಹಬ್ಬದ ಅಂಗವಾಗಿ ನಾವು ಪಾಲಿಸಬೇಕಾದ ನಿಯಮಗಳು: 1)ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಬೇಕು. 2)ಮಣ್ಣಿನಲ್ಲಿ ಕರಗದಂತಹ ರಾಸಾಯನಿಕ ವಸ್ತು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರುವುದು ಸೂಕ್ತ. 3)ಬಾಳೆ ಎಲೆ ಅಥವಾ ಪುನಃ ಬಳಸಬಹುದಾದಂತಹ ಸ್ಟೀಲ್ ತಟ್ಟೆಯನ್ನು ಬಳಸಿ.4)ರಾಸಾಯನಿಕ ಬಣ್ಣಗಳು ಬೇಡ.5)ಪಟಾಕಿ ಮತ್ತು ಮನರಂಜನಾ ಶಬ್ದ ಮಾಲಿನ್ಯವನ್ನು ನಿಯಂತ್ರಿಸಿ.
6)ನೈಸರ್ಗಿಕ ಹೂವುಗಳ ಬಳಕೆ ಮಾಡಿ. 7)ವಿಸರ್ಜನೆಯೂ ಪರಿಸರ ಸ್ನೇಹಿಯಾಗಿರಬೇಕು. 8)ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು.
ಒಟ್ಟಾರೆಯಾಗಿ ನಮ್ಮ ಸಂತೋಷದ ಸಲುವಾಗಿ ಗಣೇಶ ಹಬ್ಬದ ಆಚರಣೆ ನಮಗೆ ನೋವನ್ನು ತರಬಾರದು. ಹಾಗಾಗಿ ನಾವು ಒಂದಿಷ್ಟು ಒಳ್ಳೆಯ ಕೆಲಸ ಹಾಗೂ ಪ್ರತಿಜ್ಞೆಯ ಮೂಲಕ ಹಬ್ಬದ ಆಚರಣೆ ಮಾಡುವುದು ಸೂಕ್ತ. ಅದರಿಂದ ಆರೋಗ್ಯಕರ ಹಬ್ಬದ ಆಚರಣೆ ನಮ್ಮದಾಗುವುದು. ಗಣೇಶ ಹಬ್ಬದಲ್ಲಿ ರಸ್ತೆ ಬದಿಯಲ್ಲಿ ಹಾಗೂ ಚರಂಡಿಯಲ್ಲಿ ಕಸಗಳನ್ನು ಎಸೆಯದೇ ಕಸದ ಡಬ್ಬಿಗಳಿಗೆ ಹಾಕುವಂತೆ ಜಾಗೃತಿ ಅರಿವು ಮೂಡಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಬೇಕು. ಏನಂತೀರಿ..? ಕೊನೆಯ ಪ್ರಣಾಮಗಳು: “ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್”
ಲೇಖನ: ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು, ಹವ್ಯಾಸಿ ಬರಹಗಾರರು.
ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ
ದೂರವಾಣಿ 9742193758
ಮಿಂಚಂಚೆ basu.ygp@gmail.com