ಯರಗಟ್ಟಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಪ್ರಮಾಣ ಹೆಚ್ಚಿಸಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುನ್ನು ಸ್ವಾಗತಿಸಿ ಎರಡೂ ಸಮಾಜದವರು ಬುಧವಾರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ವಿಜಯೋತ್ಸವ ಆಚರಿಸಿದರು.
ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು, ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಮೀಸಲಾತಿ ಹೆಚ್ಚಳಕ್ಕೆ ಅವಿರತ ಹೋರಾಟ ನಡೆಸಿದ ಮಾದಿಗ ಸಮುದಾಯದವರು ಬಾಬಾ ಸಾಹೇಬ್ ಅಂಬೇಡ್ಕರ್ ಪರವಾಗಿಯೂ ಘೋಷಣೆ ಹಾಕಿದರು.
ಸಮುದಾಯದ ಮುಖಂಡರ ಸತತ ಹೋರಾಟ ಹಾಗೂ ಎರಡೂ ಸಮಾಜದವರ ಒಗ್ಗಟ್ಟಿನಿಂದ ಸರ್ಕಾರ ತಲೆಬಾಗಿ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ. ಸರ್ಕಾರದ ಈ ನಿರ್ಧಾರದಿಂದ ಎಸ್ಸಿ/ಎಸ್ಟಿ ಸಮಾಜದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅನುಕೂಲವಾಗಲಿದೆ ಎಂದು ಮುಖಂಡ ಬಾಸ್ಕರ ಹಿರೇಮೆತ್ರಿ ತಿಳಿಸಿದರು.
ಸಂತೋಷ ಚನ್ನಮೇತ್ರಿ, ಮಂಜುನಾಥ ನಿಲಪ್ಪನ್ನವರ, ಯಲ್ಲಪ್ಪ ಪಟ್ಟಪ್ಪನವರ, ಹನುಮಂತ ನರೇರ, ಬಾಬು ಚನ್ನಮೆತ್ರಿ, ಚಿದಂಬರ ಕಟ್ಟಿಮನಿ, ಲಕ್ಕಪ್ಪ ಜಗದಾರ ಪ್ರಕಾಶ ತಳವಾರ, ಲಲಿತಾ ಹುಣಶೀಕಟ್ಟಿ, ಕಾಮಾಕ್ಷಿ ಬಾಜನವರ, ಅರುಣ ನೀಲಪ್ಪನವರ, ಶಾಮ ಕಾರೆಪ್ಪನವರ, ಸುರೇಶ ತಮ್ಮಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.