ರಾಮದುರ್ಗ,ಆ.೧೮ ಗ್ರಾಮ ಪಂಚಾಯತ್ ನೌಕರರ ಯಾವುದೇ ಸಮಸ್ಯೆಗಳು ಇದ್ದರೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವದು. ಈಗಾಗಲೇ ತಾವು ಹೋರಾಟ ನಡೆಸಿ ಕೆಲವೊಂದು ಬೇಡಿಕೆ ಪಡೆದುಕೊಂಡಿದ್ದೀರಿ. ನಿಮ್ಮ ಇನ್ನುಳಿದ ಬೇಡಿಕೆಗಳ ಬಗ್ಗೆ ನಿಮ್ಮ ಮುಖಂಡರ ಜೊತೆ ಮಾತನಾಡಿ ಸರ್ಕಾರದ ಗಮನಕ್ಕೆ ತರುವುದಾಗಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ್ ಸಭಾ ಭವನದಲ್ಲಿ ನಡೆದ ಗ್ರಾಮ ಪಂಚಾಯತ್ ನೌಕರರ ಏಳನೇ ತಾಲೂಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಸುಧಾರಣೆಗೆ ಪಂಚಾಯತ್ ನೌಕರರು ಶ್ರಮವು ಪ್ರಮುಖವಾಗಿದ್ದು, ಜನರೊಂದಿಗೆ ಸಹಕಾರಯುತವಾಗಿ ಸರಕಾರದ ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಜಿ.ಎಂ. ಜೈನೆಖಾನ್ ಮಾತನಾಡಿ, ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಪಂಚಾಯತ್ ನೌಕರರು ಇಡೀ ರಾಜ್ಯದಲ್ಲಿ ಸಂಘಟಿಸಿ ನಿರಂತರ ಹೋರಾಟ ಮಾಡಿದ್ದರ ಫಲವಾಗಿ ಇವತ್ತು ಪಂಚಾಯತ್ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ಸೇರಿಸಿ ವೇತನ ಸಿಗುತ್ತಿರುವದು ಹೆಮ್ಮೆಯ ವಿಷಯ. ಅಷ್ಟೇ ಅಲ್ಲದೇ ಮೊದಲು ತೆರಿಗೆ ವಸೂಲಿ ಮಾಡಿ ವೇತನ ಪಡೆಯುತ್ತಿದ್ದೆವು.ಈಗ ಸರ್ಕಾರದ ನಿಧಿಯಿಂದ ವೇತನ ಪಡೆಯುತ್ತಿರುವದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಇನ್ನೂ ಪಿಂಚಣಿಗಾಗಿ ನಮ್ಮ ಹೋರಾಟ ನಿರಂತರ ನಡೆಯಬೇಕಾಗಿದೆ. ತಾವೆಲ್ಲರೂ ಈ ಹೋರಾಟಕ್ಕೆ ಸಿದ್ದರಾಗಬೇಕೆಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರ ಸಂಘದ ಮುಖಂಡ ನಾಗಪ್ಪ ಸಂಗೊಳ್ಳಿ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ತಯಾರಾದರೆ ನಮ್ಮ ಬೇಡಿಕೆಗಳು ಖಂಡಿತವಾಗಿ ಈಡೇರುತ್ತವೆ. ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ನೌಕರ ಸಂಘದ ಅಧ್ಯಕ್ಷ ದಿಲೀಪ ಬೋವಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಖಾಸಗೀಕರಣದ ನೀತಿಯಿಂದ ಪಂಚಾಯತ್ ನೌಕರರು ಮುಂದಿನ ಅವಧಿಯಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಅದಕ್ಕೆ ಕೇಂದ್ರ-ರಾಜ್ಯ ಸರ್ಕಾರದ ಖಾಸಗಿಕರಣದ ನೀತಿಯನ್ನು ವಿರೋಧಿಸಿ ನಾವೆಲ್ಲ ಹೋರಾಟಕ್ಕೆ ತಯಾರಾಗೋಣವೆಂದು ಹೋರಾಟಕ್ಕೆ ಕರೆಕೊಟ್ಟರು.
ಅಂಗನವಾಡಿ ನೌಕರ ಸಂಘದ ತಾಲೂಕ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಪಂಚಾಯತ್ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದರು. ಕಾರ್ಯದರ್ಶಿ ಕೇಶವ ದಾಸರ ನಿರೂಪಿಸಿ, ವಂದಿಸಿದರು.
ತಾಲೂಕ ಸಮಿತಿ ರಚನೆ:
ಗ್ರಾಮ ಪಂಚಾಯತ್ ನೌಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷರಾಗಿ ದಿಲೀಪ್ ಬೋವಿ, ಕಾರ್ಯದರ್ಶಿಯಾಗಿ ಕೇಶವ ದಾಸರ, ಖಜಾಂಚಿಯಾಗಿ ರಮೇಶ್ ತಿಗಡಿ ಇವರ ಜೊತೆ ೨೧ ಜನರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಿ ತಾಲೂಕ ಸಮಿತಿ ರಚಿಸಲಾಯಿತು.
ಗ್ರಾಮಗಳ ಸುಧಾರಣೆಗೆ ಪಂಚಾಯತ್ ನೌಕರರು ಶ್ರಮವು ಪ್ರಮುಖ : ಪಟ್ಟಣ
