ಯರಗಟ್ಟಿ: ಜಗತ್ತಿನಲ್ಲಿಯೇ ಮೊತ್ತಮೊದಲು ಸಮಾನತೆ, ಸಹಬಾಳ್ವೆ, ಕಾಯಕ, ದಾಸೋಹದಂತಹ ಸಾರ್ವಕಾಲಿಕ ಮಾನವೀಯ ಮೌಲ್ಯಗಳನ್ನು ಜಾರಿಗೊಳಿಸಿದ ಬಸವಾದಿ ಶರಣರ ತತ್ವಾದರ್ಶಗಳು ವಿಶ್ವವ್ಯಾಪಿಯಾಗಲಿ ಎಂದು ಕಡಕೋಳದ ವಿರಕ್ತಮಠದ ಶ್ರೀ ಮ.ನಿ.ಪ್ರ.ಸ್ವ. ಸಚ್ಚಿದಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಮಹಾಂತ ದುರದುಂಡೀಶ್ವರ ಮಠದಲ್ಲಿ ಶ್ರಾವಣ ಮಾಸದ ಮೂರನೆಯ ಶಿವಾನುಭವಗೋಷ್ಠಿ ಹಾಗೂ ದಾನಮ್ಮದೇವಿ ವಿವಾಹ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಶರಣರು ಒಂದಿಲ್ಲೊಂದು ಕಾಕಯದಲ್ಲಿ ನಿರತರಾಗಿದ್ದು ಪ್ರತಿಫಲವನ್ನು ಪ್ರಸಾದವೆಂದು ಭಾವಿಸುತ್ತಿದ್ದರು. ಹೆಚ್ಚಿನದನ್ನು ದಾಸೋಹಕ್ಕೆ ಅರ್ಪಿಸುತ್ತಿದ್ದರು. ಸಂಗ್ರಹಬುದ್ಧಿ ಇಲ್ಲದ ಕಾರಣ ಅವರ ಬದುಕು ನೆಮ್ಮದಿಯುತವಾಗಿತ್ತು ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ’ಕಾಯಕಯೋಗಿ ನುಲಿಯ ಚಂದಯ್ಯ ಅವರ ಜೀವನ ಹಾಗೂ ಸಾಧನೆ’ಗಳನ್ನು ಕುರಿತು ಉಪನ್ಯಾಸ ನೀಡಿದರು.
ಇತ್ತೀಚೆಗೆ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಡ್ಲಿವಾಡದ ಹನುಮಂತ ನಂದಿ ಹಾಗೂ ಮೂರು ಕಾದಂಬರಿಗಳು ಸೇರಿದಂತೆ ನೂರಾರು ಕವಿತೆಗಳನ್ನು ರಚಿಸಿ ಸಾರಸ್ವತ ಲೋಕದಲ್ಲಿ ಮಿನುಗುತ್ತಿರುವ ಕಡಬಿಯ ಅಂಕಿತಾ ಹುಂಡೇಕಾರ ಅವರನ್ನು ಸನ್ಮಾನಿಸಲಾಯಿತು.
ಅಕ್ಕನ ಬಳಗದ ಅಧ್ಯಕ್ಷರಾದ ಉಮಾದೇವಿ ಪೂರ್ವಿಮಠ ಅಧ್ಯಕ್ಷತೆ ವಹಿಸಿದ್ದರು. ಓಂ ಶಾಂತಿಯ ಜಯಶ್ರೀ ಅಕ್ಕ, ಹಿರಿಯರಾದ ಅಶೋಕ ಹಾದಿಮನಿ, ಮಹಾಂತೇಶ ಜಕಾತಿ, ರಾಜೇಂದ್ರ ವಾಲಿ, ಗಜಾನನ ಚಿನಗುಡಿ, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ದಾನಮ್ಮ ದೇವಿಯ ಅಪಾರ ಭಕ್ತವೃಂದದವರು ಸಡಗರದಿಂದ ದಾನಮ್ಮ ದೇವಿ ಹಾಗೂ ಸೋಮನಾಥರ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದರು. ಶಿಕ್ಷಕಿಯರಾದ ಪೂರ್ಣಿಮಾ ಕತ್ತಿಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.