ಬಳ್ಳಾರಿ,ಆ.೦4.. ಜೀವನದ ಪ್ರತಿ ಕ್ಷಣವನ್ನೂ ಡಾ. ಪಿ. ರಾಧಾಕೃಷ್ಣ ಅವರು ಶೈಕ್ಷಣಿಕ ಸೇವೆಯ ಮೂಲಕ ಸಾರ್ಥಕ ಪಡಿಸಿಕೊಂಡರೆAದು ತೋರಣಗಲ್ಲು ವಲಯ ಪೊಲೀಸ್ ಅಧೀಕ್ಷಕರಾದ ಪ್ರಸಾದ ಗೋಖಲೆ ತಿಳಿಸಿದರು.
ಸನ್ಮಾರ್ಗ ಗೆಳೆಯರ ಬಳಗವು ಶನಿವಾರದಂದು ಶ್ರೀ ಚೈತನ್ಯ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಪಿ ರಾಧಾಕೃಷ್ಣ ಅವರ ಭಾವಪೂರ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಣ ಮತ್ತು ಉದ್ಯೋಗ ಅವಕಾಶ ಕಲ್ಪಿಸುವಲ್ಲಿ ರಾಧಾಕೃಷ್ಣ ಅವರು ಯಶಸ್ವಿಯಾಗಿದ್ದರೆಂದು ಪ್ರಸಾದ ಗೋಖಲೆ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಂಡೂರು ಪ್ರಭುದೇವರ ವಿರಕ್ತಮಠದ ಶ್ರೀ ಮ.ನಿ.ಪ್ರ ಪ್ರಭುಸ್ವಾಮಿಗಳು ಮಾತನಾಡುತ್ತಾ ಜೀವನದ ಸಾರ್ಥಕತೆ ಇರುವುದು ಇನ್ನೊಬ್ಬರ ಜೀವನಕ್ಕೆ ಬೆಳಕಾಗಿ ಬಾಳಿದಾಗ ಮಾತ್ರ. ಆ ನಿಟ್ಟಿನಲ್ಲಿ ಡಾ. ಪಿ. ರಾಧಾಕೃಷ್ಣ ಅವರು ಕೊನೆಯ ಉಸಿರಿನವರೆಗೂ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆಂದು ಸ್ವಾಮೀಜಿ ತಿಳಿಸಿದರು.
ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಹೆಚ್. ಲಕ್ಷ್ಮಿಕಾಂತ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಡಾ ನಿಷ್ಠಿ ರುದ್ರಪ್ಪ, ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಡಾ. ಪಿ ರಾಧಾಕೃಷ್ಣ ಅವರ ಪುತ್ರ ವಿಷ್ಣು ಪಯಾವುಲ್ಲ, ಅನುದಾನ ರಹಿತ ಆಡಳಿತ ಮಂಡಳಿ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ರಾಚಪ್ಪ, ಡಾ. ಪರಸಪ್ಪ, ಎಂ.ಟಿ. ಮಲ್ಲೇಶಪ್ಪ, ಕೆ.ಎಂ ಮಂಜುನಾಥ, ವಿ.ಎಸ್. ಪ್ರಭಯ್ಯ ಮತ್ತಿತರರು ಭಾವಪೂರ್ಣ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಬಿ. ಚಂದ್ರಶೇಖರ ಆಚಾರ್ ನಿರೂಪಿಸಿದರು.