ಧಾರವಾಡ : ಎನ್. ಹೆಚ್.ಕೋನರಡ್ಡಿ, ಶಾಸಕರು ನವಲಗುಂದ ವಿಧಾನ ಸಭಾ ಕ್ಷೇತ್ರ ಹಾಗೂ ದಿವ್ಯಪ್ರಭು, ಜೆಆರ್ಜಿ, ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ ರವರ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯ ಮುಂಗಾರು ಹಂಗಾಮಿಗೆ ಪುಸ್ತುತ ಅವಶ್ಯವಿರುವ ಯೂರಿಯಾ ರಸಗೊಬ್ಬರ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದರು.
ಜಂಟಿ ಕೃಷಿ ನಿರ್ದೇಶಕರು ಮಾತನಾಡಿ, ಪ್ರಸಕ್ತ ಸಾಲಿನ ಜುಲೈ ಮಾಹೆವರೆಗೆ ಜಿಲ್ಲೆಯ ಯೂರಿಯಾ ರಸಗೊಬ್ಬರದ ಒಟ್ಟು 17223 ಮೆ.ಟನ್ ಬೇಡಿಕೆ ಇದ್ದು, ಇಲ್ಲಿಯವರೆಗೆ 23108 ಮೆ.ಟನ್ ಗಳಷ್ಟು ಸರಬರಾಜು ಆಗಿದ್ದು, 22253 ಮೆ.ಟನ್ ಗಳಷ್ಟು ವಿತರಣೆಯಾಗಿದೆ ಎಂದು ತಿಳಿಸಿದರು.
ಮುಂದುವರೆದು ಕಳೆದ ಮುಂಗಾರು ಹಂಗಾಮಿಗೆ ಹೋಲಿಸಿದರೆ ಮೆಕ್ಕೆಜೋಳ ಬೆಳೆಯು ಸರಿಸುಮಾರು 13000 ಹೆಕ್ಟೇರಗಳಷ್ಟು ಹತ್ತಿ 4100 ಹೆಕ್ಟೇರಗಳಷ್ಟು, ಕಬ್ಬು 2100 ಹೆಕ್ಟೇರಗಳಷ್ಟು ಹೆಚ್ಚಿಗೆ ಬಿತ್ತನೆಯಾಗಿರುತ್ತದೆ. ಹಾಗೂ ಜೂನ್ ಮಾಹೆಯ ಎರಡನೇ ವಾರದಲ್ಲಿ ಆದ ಹೆಚ್ಚಿನ ಮಳೆಯಿಂದಾಗಿ ಮುಂಚಿತವಾಗಿ ಬಿತ್ತನೆಯಾದ ಕ್ಷೇತ್ರದಲ್ಲಿ ಹಾನಿಯಾದ ಕಾರಣ ಅಂದಾಜು 13000 ಹೆಕ್ಟೇರ್ ಕ್ಷೇತ್ರದಲ್ಲಿ ಮರುಬಿತ್ತನೆ ಆಗಿದ್ದು, ರೈತರು ಪರ್ಯಾಯವಾಗಿ ಮುಸುಕಿನಜೋಳ ಮತ್ತು ಹತ್ತಿ ಬಿತ್ತನೆ ಮಾಡಿರುತ್ತಾರೆ. ಈ ಕಾರಣಕ್ಕಾಗಿ ಮತ್ತು ರೈತರು ವಿವಿಧ ಬೆಳೆಗಳಿಗೆ ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನು ಬಳಸುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿರುತ್ತದೆ ಎಂದು ಸಭೆಗೆ ತಿಳಿಸಿದರು. ಶಾಸಕರು ಮಾತನಾಡುತ್ತಾ, ಜಿಲ್ಲೆಯಲ್ಲಿ ಮುಂದಿನ ಒಂದು ವಾರದೊಳಗೆ ರೈತರು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೆಳೆಗಳಿಗೆ ನೀಡುವುದು ಅತ್ಯವಶ್ಯವಿರುವ ಕಾರಣ ನಿಗದಿತ ಸಮಯದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಪೂರೈಕೆ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.
ಮಾನ್ಯ ಜಿಲ್ಲಾಧಿಕಾರಿಗಳು ಮಾತನಾಡಿ, ರೈತರಿಗೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ರಸಗೊಬ್ಬರವನ್ನು ಬಳಸದಂತೆ ಜಾಗೃತಿ ಮೂಡಿಸಲು ಕ್ರಮವಹಿಸಲು ಸೂಚಿಸಿದರು. ಹಾಗೂ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿರುವ ನವೀನ ತಾಂತ್ರಿಕತೆಯಾದ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ರೈತರಲ್ಲಿ ಅರಿವು ಮೂಡಿಸಲು ಹೆಚ್ಚಿನ ಪ್ರಚಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ ಅಂತರವಳ್ಳಿ, ಸಹಾಯಕ ಆಯುಕ್ತ ಶಾಲಮ್ ಹುಸೇನ, ಉಪ ಕೃಷಿ ನಿರ್ದೇಶಕ ಸಂದೀಪ ಹಾಗೂ ಜಯಶ್ರೀ ಹಿರೇಮಠ ಮತ್ತು ಎಲ್ಲಾ ತಾಲೂಕಿನ ತಹಶೀಲದಾರರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಹಾಜರಿದ್ದರು.