ಹಿರಿಯ ನಟ ಕ.ಸುಚೇಂದ್ರ ಪ್ರಸಾದ ಚಿತ್ರಕಥೆ-ಸಂಭಾಷಣೆ ಜತೆಗೆ ನಿರ್ದೇಶನ ಮಾಡಿರುವ ‘ಪದ್ಮಗಂಧಿ’ ಚಿತ್ರದ ಕನ್ನಡ, ಸಂಸ್ಕ್ರತ ಮತ್ತು ಹಿಂದಿ ಭಾಷೆಯ ಟ್ರೇಲರ್ ಹಾಗೂ ಹಾಡುಗಳ ಅನಾವರಣ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಮಾಜಿ ಎಂಎಲ್ಸಿ, ಅಂಕಣಕಾರ್ತಿ, ಸಂಸ್ಕ್ರತ ಭೂಮಿಕೆಯಲ್ಲಿ ನಾನಾ ದಿಕ್ಕಿನಲ್ಲಿ ಅಧ್ಯಾಯನ ನಡೆಸಿರುವ ನಿವೃತ್ತ ಪ್ರೊಫೆಸರ್ ಎಸ್.ಆರ್.ಲೀಲಾ ಅವರು ರಚಸಿ, ನಿರ್ಮಾಣ ಮಾಡಿರುವ ಚಿತ್ರವಾಗಿದೆ ‘ಪದ್ಮಗಂಧಿ’.
ಶಂಕರ್ಶಾನ್ಭೋಗ್ ಸೇರಿದಂತೆ ಹಲವು ಗಾಯಕರುಗಳು ಗೀತೆಯ ಸಾಲು ಹಾಡುವುದರ ಮೂಲಕ, ಹಾಗೂ ಕೋಟೆ ರಾಮಚಂದ್ರಭಟ್ ಸಂಸ್ಕ್ರತ ಭಾಷೆಯ ಟ್ರೇಲರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯವಾಗಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ಶ್ರೀಯವರು
ಭಾಗವಹಿಸಿದ್ದು ಸಮಾರಂಭಕ್ಕೆ ಭೂಷಣ ತಂದುಕೊಟ್ಟಿತು. ಅವರು ಮಾತನಾಡಿ “ಸುಚೇಂದ್ರ ಪ್ರಸಾದ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆಂದು ಭಾವಿಸಿದ್ದೇನೆ. ಕನ್ನಡ ಚಿತ್ರರಂಗ ಲಾಭದಾಯಕವಲ್ಲದ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಿದ್ದಾರೆ. ಸಂಸ್ಕ್ರತ ಅನ್ನುವುದು ದೇಶಾಂತರಕ್ಕೂ ಸಲ್ಲುವ ಭಾಷೆ. ಆದ್ದರಿಂದ
ವಿಸ್ತೃತವಾದಂತ ನೋಡುಗರು, ಕೇಳುಗರು ಇರುತ್ತಾರೆ. ಇದರ ಹಿಂದೆ ಕೈ ಜೋಡಿಸಿದ ಎಲ್ಲರಿಗೂ ಶ್ರೇಯಸ್ಸು ಸಿಗಲಿ” ಎಂದು ಆಶೀರ್ವದಿಸಿದರು.
ವಿದ್ಯಾರ್ಥಿಯಾಗಿ ಕು.ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್, ಶತಾವಧಾನಿ ಡಾ.ಆರ್.ಗಣೇಶ್, ಡಾ.ಗೌರಿ ಸುಬ್ರಹ್ಮಣ್ಯ (ಧರ್ಮಾಧಿಕಾರಿಗಳು, ಮುಕ್ತಿನಾಗ ದೇವಸ್ಥಾನ), ಡಾ.ಪ್ರೇಮಾ, ಡಾ.ಹೇಮಂತ್ಕುಮಾರ್, ಆಚಾರ್ಯ ಮೃತ್ಯುಂಜಯಶಾಸ್ತ್ರಿ, ಜಿ.ಎಲ್.ಭಟ್(ಶಿಲ್ಪಜ್ಞ), ಮೃತ್ಯುಂಜಯಶಾಸ್ತ್ರಿ, ಪಂಡಿತ ಪ್ರಸನ್ನವೈದ್ಯ, ಡಾ.ದೀಪಕ್ಪರಮಶಿವನ್, ಹೇಮಂತಕುಮಾರ ಜಿ ಬಣ್ಣ ಹಚ್ಚಿರುವುದು ಚಿತ್ರಕ್ಕೆ ಹಿರಿಮೆ ತಂದುಕೊಟ್ಟಿದೆ. ಡಾ.ದೀಪಕ್ ಪರಮಶಿವನ್ ಸಂಗೀತ, ಮನುಯಪ್ಲಾರ್-ನಾಗರಾಜ್ ಅದ್ವಾನಿ-ಗಿರಿಧರ್ದಿವಾನ್ ಛಾಯಾಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಸಂಕಲನವಿದೆ.
ಈ ಸಂದರ್ಭದಲ್ಲಿ ಕ.ಸುಚೇಂದ್ರಪ್ರಸಾದ ಸಿನಿಮಾ ಹುಟ್ಟಿದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು.
“ಸಿನಿಮಾವು ಆದಿಯಿಂದ ಅಂತ್ಯದವರೆಗೂ ‘ಪದ್ಮಗಂಧಿ’ಯ ಪರಿಮಳ ಪಸರಿಸುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇರುವುದು ವಿಶೇಷ. ನಮ್ಮಲ್ಲಿ ದೈವೀಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಿಧಿಯನ್ನು ವಿಸ್ತಿರಿಸಿಕೊಳ್ಳುತ್ತಾ, ಅದರ ಅಘಾದತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರಯಂತೆ ಭಾಸವಾಗಲಾರಂಭಿಸಿದೆ. ಇದೆಲ್ಲಾವನ್ನು ಸಂಶೋಧಿಸಿ ವಿಷಯಗಳನ್ನು ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿರುವಂತೆ ತೆರೆ ಮೇಲೆ ತೋರಿಸಿದ್ದಾರೆ. ಮಾಧ್ಯಮದವರು ವ್ಯಾಪಕ ಪ್ರಚಾರ ಮಾಡಿದರೆ ನಮ್ಮ ಶ್ರಮ ಸಾರ್ಥಕವಾದಂತೆ” ಎಂದು ನಿರ್ಮಾಪಕಿ ಎಸ್.ಆರ್.ಲೀಲಾ ಕೋರಿದರು.