ಬಳ್ಳಾರಿ29.. ಜಿಲ್ಲೆಯ ವಿಮ್ಸ್ ಗ್ರೌಂಡ್ ನಲ್ಲಿ ಈಶ್ವರಚಂದ್ರ ವಿದ್ಯಾಸಾಗರವರ 134ನೇ ಸ್ಮರಣ ದಿನವನ್ನು ಆಚರಿಸಲಾಯಿತು .ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ. ಈರಣ್ಣ ಅವರು ಮಾತನಾಡಿ ಉಳಿಗಮಾನ್ಯ ಆಳ್ವಿಕೆಯಡಿ ಬಹುಕಾಲದವರೆಗೆ ಅಜ್ಞಾನ ಹಾಗೂ ಮೌಡ್ಯದ ಅಂಧಕಾರದಲ್ಲಿ ಮುಳುಗಿ ಬಳಲುತ್ತಿದ್ದ ಭಾರತದ ನೆಲಕ್ಕೆ ಆಧುನಿಕ ಜ್ಞಾನದ ಬೆಳಕನ್ನು ಹೊತ್ತು ತಂದ ಸೂರ್ಯನಂತೆ ಉದಯಿಸಿದವರು ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್!! ಶತಮಾನಗಳವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಕೆಳವರ್ಗದ ಸಮುದಾಯಗಳಿಗೆ ವಿದ್ಯೆಯನ್ನು ನೀಡಲು ಮತ್ತು ಬಾಲ್ಯದಲ್ಲೇ ವಿಧವೆಯರಾಗಿ ನರಕದ ಬದುಕು ಸವೆಸುತ್ತಿದ್ದ ಹೆಣ್ಣುಮಕ್ಕಳ ಮರುವಿವಾಹಕ್ಕಾಗಿ ಅವರು ಅವಿರತ ಶ್ರಮಿಸಿದರು. ಜೊತೆಗೆ, ಹಳೆಯ ಗೊಡ್ಡು ಸಂಪ್ರದಾಯಗಳ ಸಂಕುಚಿತ ಚಿಂತನೆಗಳ ವಿರುದ್ಧ ಹೋರಾಡಿದ ವಿದ್ಯಾಸಾಗರರು, ನವೋದಯ ಚಳುವಳಿಯ ಪತಾಕೆಯನ್ನು ಭಾರತದ ಆಗಸದಲ್ಲಿ ಹಾರಿಸಿದರು ಎಂದರು.
ಇಂದು ಶಿಕ್ಷಣವು ಖಾಸಗೀಕರಣಗೊಂಡು ಮಾರಾಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.ರಾಜ್ಯದಲ್ಲಿ 7000ಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ಚಾವಣಿಗಳು ಸೋರುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 29 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದದಿಂದ ವಂಚಿತರಾಗುತ್ತಿದ್ದಾರೆ. ನಿರುದ್ಯೋಗ, ಬಡತನ, ಹಸಿವು ದೇಶದಾದ್ಯಂತ ತಾಂಡವವಾಡುತ್ತಿದೆ. ಬಡ ರೈತ ಕಾರ್ಮಿಕರು, ಮಧ್ಯಮವರ್ಗದ ಜನತೆ ತುಳಿತಕ್ಕೊಳಪಡುತ್ತಿದ್ದಾರೆ. ಕುಸಂಸ್ಕೃತಿ ತೀವ್ರವಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ.
ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಎಂಥದ್ದೇ ಅನ್ಯಾಯವನ್ನೂ ಪ್ರಶ್ನಿಸುತ್ತಿದ್ದ ವಿದ್ಯಾಸಾಗರರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಸಾಮಾಜಿಕ ಪಿಡುಗುಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಮುನ್ನುಗ್ಗಬೇಕಿದೆ. ಆಗ ಮಾತ್ರ ನಾವು ವಿದ್ಯಾಸಾಗರರಿಗೆ ನೈಜ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಕಾಂತೇಶ್, ತಿಪ್ಪೇಸ್ವಾಮಿ , ಹಾಗೂ ಸಾರ್ವಜನಿಕರು ಮತ್ತು ಇನ್ನಿತರರು ಭಾಗವಹಿಸಿದ್ದರು