ಕಾಗವಾಡ:ಪಟ್ಟಣದಲ್ಲಿ ಮಹಿಳೆಯೋರ್ವಳು ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರನ್ನ ವಂಚಿಸಿ ಸುಮಾರು ೨೫ ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮಿನಾಕ್ಷಿ ತೇಲಿ ಇವಳು ಕಳೆದ ಹತ್ತು ಇಪ್ಪತ್ತು ವರ್ಷಗಳಿಂದ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮುಖಾಂತರ ಸಾಲ ಕೊಡಿಸುವ ಏಜೆಂಟಳಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆಯರ ವಿಶ್ವಾಸ ಗಳಿಸಿ ಈಗ ತನ್ನ ಮಗನಿಗೆ ನೌಕರಿಗಾಗಿ ಹಣ ಹೊಂದಿಸಬೇಕೆಂದು ನಂಬಿಸಿ ಅನೇಕ ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದುಕೊಂಡು ಸುಮಾರು ಇಪ್ಪತ್ತು ಐದು ಲಕ್ಷಗಳೊಂದಿಗೆ ಪರಾರಿಯಾಗಿದ್ದಾಳೆ.
ಹಣ ಕಳೆದುಕೊಂಡ ಮಹಿಳೆಯರು ಈ ಕುರಿತು ಪಟ್ಟಣದ ಪ್ರಮುಖರಿಗೆ ಮತ್ತು ಕಾಗವಾಡ ಪೋಲಿಸರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿ ಮೂರು ತಿಂಗಳಾದರೈ ಯಾವದೇ ಪ್ರಯೋಜನವಾಗಿಲ್ಲ.ನೊಂದ ಮಹಿಳೆಯರು ಈಗ ಮಾಧ್ಯಮದವರೊಂದಿಗೆ ಮಾತನಾಡಿ,ಹಣ ಕಳೆದುಕೊಂಡ ಬಗ್ಗೆ ವಿವರಣೆ ನೀಡಿದ್ದು ತಮಗೆ ನ್ಯಾಯ ಕೊಡಿಸಬೇಕೆಂದು ಅವಲತ್ತುಕೊಂಡಿದ್ದಾರೆ.
ಈ ಮಧ್ಯೇ ಹಣದೊಂದಿಗೆ ಪರಾರಿಯಾಗಿರುವ ಮಹಿಳೆಯು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆಕೆಯ ಮಗನನ್ನು ಸಂಪರ್ಕಿಸಿದಾಗ ನಮ್ಮ ತಾಯಿ ನನ್ನ ನೌಕರಿಗಾಗಿ ಹಣ ನೀಡಿದ್ದು ನಿಜ ಆದರೆ ಕೇವಲ ನಾಲ್ಕು ಮಹಿಳೆಯರ ಸಂಘದ ಹಣ ಮಾತ್ರ ನೀಡಿರುತ್ತಾಳೆ ಬಾಕಿ ಮಹಿಳೆಯರು ನೀಡಿದ ಹಣ ವಿಷಯ ನನಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದಾನೆ.ಈ ಪ್ರಕರಣದಲ್ಲಿ ಸುಮಾರು ಹದಿನೈದು ಮಹಿಳೆಯರು ತಮ್ಮ ಹೆಸರಿನಲ್ಲಿ ಐವತ್ತರಿಂದ ಒಂದೂವರೆ ಲಕ್ಷದವರೆಗೆ ಸಾಲ ತೆಗೆದು ವಂಚಕಿ ಮಹಿಳೆಯರಿಗೆ ನೀಡಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಸಂಭಂಧಪಟ್ಟ ಅಧಿಕಾರಿಗಳು,ಪೋಲಿಸ್ ಅಧಿಕಾರಿಗಳು ವಂಚಕ ಮಹಿಳೆಯನ್ನು ಹಿಡಿದು ನೊಂದ ಮಹಿಳೆಯರಿಗೆ ನ್ಯಾಯ ಕೊಡುವರೇ ಕಾಯ್ದು ನೋಡಬೇಕಿದೆ.ಜೊತೆಗೆ ಕಳೆದ ಕೆಲ ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘದ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು,ಸರ್ಕಾರ ಸ್ವಸಹಾಯ ಸಂಘಳಿಗೆ ಕಟ್ಟುನಿಟ್ಟಿನ ಕಾನೂನು ರೂಪಿಸುವ ಅಗತ್ಯವಿದೆ.