ಬೆಂಗಳೂರು: ಬಿಜೆಪಿಯವರು ಮಾತನಾಡುವುದು ಒಂದು, ಮಾಡುವುದು ಮತ್ತೊಂದು. ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಹೊಡೆದು ಪಾಸಾಗಿರುವ ಸ್ಟೂಡೆಂಟ್ಸ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಟೀಕಿಸಿದ್ದಾರೆ.
ಮುಂಬರುವ ಬಿಹಾರ ಚುನಾವಣೆಗೆ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಘೋಷಿಸಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ನರೇಗಾ, ಆಧಾರ್ ಕಾರ್ಡ್ ಜಾರಿಗೆ ತರುವುದನ್ನು ವಿರೋಧ ಮಾಡಿದ್ದರು. ದೇಶದಲ್ಲಿ ಉತ್ತಮ ಯೋಜನೆಗಳನ್ನು ವಿರೋಧಿಸಿದರು. ಆದರೀಗ ನಮ್ಮ ಯೋಜನೆಗಳನ್ನೇ ಅನುಸರಿಸುತ್ತಿದ್ದಾರೆ ಎಂದರು.
ಮಹಿಳಾ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ಮಾಡಿದ್ದೆವು. ಇದೀಗ ಕರ್ನಾಟಕದಲ್ಲಿ ಯಶಸ್ವಿಯಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದನ್ನು ನೋಡಿದ ಬಿಜೆಪಿಗರು, ಮಹಾರಾಷ್ಟ್ರ, ದೆಹಲಿಯಲ್ಲಿ ನಮ್ಮ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆ ಗೆದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ಕೇಂದ್ರದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ, ಕರ್ನಾಟಕ ಮಾಡೆಲ್ ಇಟ್ಟುಕೊಂಡು ನರೇಂದ್ರ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕದ ಯೋಜನೆಗಳನ್ನ ಹಾಗೂ ಮಾಡೆಲ್ ಅನ್ನು ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಸಚಿವರು ಪ್ರಶ್ನಿಸಿದರು.
* *ಪೀಠಕ್ಕೆ ಬೀಗ ಹಾಕಿದ್ದು ಸರಿಯಿಲ್ಲ*
ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ವಿಷಯದಲ್ಲಿ ನಾನು ಕಾಂಗ್ರೆಸ್, ಬಿಜೆಪಿ ಅಂತ ಮಾತನಾಡುವುದಿಲ್ಲ. ಪೀಠಕ್ಕೆ ಬೀಗ ಹಾಕಿದ್ದು ಸಭ್ಯತೆ ಅಲ್ಲ. ಇದನ್ನು ಖಂಡಿಸುತ್ತೇನೆ. ನಾನು ಗುರುಗಳ ಸಂಪರ್ಕದಲ್ಲಿದ್ದೇನೆ. ಶ್ರೀಗಳು ನಾಡಿದ್ದು ಬೆಳಗಾವಿಗೆ ಬರುತ್ತಿದ್ದು, ಈ ಬಗ್ಗೆ ಗುರುಗಳ ಜೊತೆ ಮಾತನಾಡುತ್ತೇನೆ ಎಂದರು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮಾತಿಗೆ ಬೆಲೆ ಕೊಡುವುದು ಬೇಡ. ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಲಕ್ಷ್ಮೀ ಹೆಬ್ಬಾಳಕರ್ ಏನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಸರ್ಕಾರದಲ್ಲಿ ನಾವು ಏನು ಒತ್ತಡ ಹೇರುತ್ತಿದ್ದೇವೆ ಎಂದು ಬೆಲ್ಲದ್ ಅವರಿಗೆ ಗೊತ್ತಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.