ಯರಗಟ್ಟಿ: ಪಾಚೀನ ಕಾಲದಿಂದಲೂ ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಸಂದರ್ಭದಲ್ಲಿ ಗುರುವಿನ ಸ್ಥಾನವು ದೊಡ್ಡದಾಗಿದ್ದು, ದೇವತೆಗಳಿಗಿಂತ ಎತ್ತರದ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಹೇಳಿದರು.
ನಗರದ ಮಹಾಂತ ದುರದುಂಡೀಶ್ವರ ಶ್ರೀಮಠದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಯೋಜಿಸಿದ್ದ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗುರುಗಳಾದವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶಿಷ್ಯಂದಿರಲ್ಲಿ ಶಿಸ್ತು, ಸಂಯಮ, ಸಾಮರಸ್ಯ, ಸಹಬಾಳ್ವೆ, ಪರೋಪಕಾರದಂತಹ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಾರೆ. ’ಗುರು’ ಎನ್ನುವುದು ವ್ಯಕ್ತಿಯಾಗಿರದೆ ತತ್ತ್ವವಾಗಿದ್ದು ತೆರೆದ ಮನಸ್ಸಿನಿಂದ ನೋಡಿದರೆ ಇಡೀ ಪ್ರಕೃತಿಯೇ ಗುರುವಾಗಿ ಸನ್ಮಾರ್ಗ ತೋರಬಲ್ಲದು. ಗುರುಪೂರ್ಣಿಮೆಯ ನೆಪದಲ್ಲಿ ಎಲ್ಲಾ ಗುರುಗಳನ್ನು ಸ್ಮರಿಸುವುದು ಕೃತಜ್ಞತೆಯ ಸಂಕೇತವಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಭಗವಾಧ್ವಜಕ್ಕೆ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಶಾರೀರಿಕ ಪ್ರಮುಖರಾದ ಸನ್ಮಿತ್ ಅವರು ಒಂದು ಶತಮಾನದ ಸಂಘದ ಬೆಳವಣಿಗೆ, ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಟಿ.ಎಂ. ಕಾಮಣ್ಣವರ, ಬಾಸ್ಕರ ಹಿರೇಮೆತ್ರಿ, ಕುಮಾರ ಹಿರೇಮಠ, ವಿಶಾಲಗೌಡ ಪಾಟೀಲ, ಈರಣ್ಣಾ ಮಠಪತಿ, ವಿಠ್ಠಲ ಬಾಂಗಿ, ಎನ್. ಕೆ ಹುಚ್ಚರೆಡ್ಡಿ, ರಾಜೇಂದ್ರ ವಾಲಿ, ಡಾ. ಬಡಿಗೇರ, ಚೇತನ ಜಕಾತಿ, ಬಾಲಕೃಷ್ಣ ಹಡಪದ, ಸದಾನಂದ ಪಾಟೀಲ, ದೇವೇಂದ್ರ ಕಮ್ಮಾರ, ವ್ಹಿ.ಡಿ. ಬಳಿಗಾರ, ಸಂತೋಷ ವಾಲಿ, ಶಿವನಾಯ್ಕ ಬೂದಿಗೋಪ್ಪ, ಪ್ರವೀಣ ಬೆಣ್ಣಿ, ಆನಂದ ನಾಯಕ, ಗೋವಿಂದ ಪೂಜೇರ, ಡಾ. ಜಗದೀಶ ಹೊಸಮನಿ, ಅಪ್ಪಣ್ಣ ನಾವಿ, ಸೇರಿದಂತೆ ಸ್ವಯಂ ಸೇವಕರು ಭಾಗವಹಿಸಿದ್ದರು.