ಬಳ್ಳಾರಿ,ಜು.12.:ಹಿರಿಯ ನ್ಯಾಯವಾದಿ, ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಎನ್.ತಿಪ್ಪಣ್ಣ ಅವರ ಅಗಲಿಕೆ ಆಘಾತ ತಂದಿದೆ ಎಂದು ಶ್ರೀಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಬಸವಲಿಂಗ ಮಹಾಸ್ವಾಮಿಗಳು ಸಂತಾಪವನ್ನು ವ್ಯಕ್ತಪಡಿಸಿದರು.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎನ್.ತಿಪ್ಪಣ್ಣ ನಮ್ಮ ಶ್ರೀಮಠದ ಅಭಿಮಾನಿಗಳೂ, ಹಿರಿಯ ರಾಜಕೀಯ ಮುತ್ಸದ್ದಿಗಳೂ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾಗಿದ್ದರು, 97 ವರ್ಷಗಳ ಸಾರ್ಥಕ ಜೀವನ ನಡೆಸಿ ಇಂದು ಲಿಂಗೈಕ್ಯರಾಗಿದ್ದು ನಾಡಿಗೆ ಅದರಲ್ಲೂ ಬಳ್ಳಾರಿ ಜಿಲ್ಲೆಗೆ ಬಹುದೊಡ್ಡ ನಷ್ಟವನ್ನುಂಟಾಗಿದೆ, ಶ್ರೀಯುತರು ಅಧ್ಯಾತ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯು ಅನುಪಮವಾದುದು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತ ಬಂದಿದ್ದು ಅವರಲ್ಲಿನ ಶಿಕ್ಷಣ ಪ್ರೇಮವನ್ನು ತೋರಿಸುತ್ತದೆ.
ಅವರು ನಮ್ಮ ಗುರುಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮಠದ ಎಲ್ಲಾ ಯಶಸ್ವಿ ಕಾರ್ಯಗಳಲ್ಲಿ ಜೊತೆಯಾಗಿರುತ್ತಿದ್ದರು. ಈ ಮಠಕ್ಕೆ ನಾವು ಗುರುಗಳಾಗಿ ಬಂದ ಮೇಲೂ ಮಠದೊಂದಿಗೆ ತಮ್ಮ ಒಡನಾಟವನ್ನು ಮುಂದುವರೆಸಿದ್ದ ತಿಪ್ಪಣ್ಣನವರು ಮಠ ಮತ್ತು ಸಮಾಜದ ಅಭಿವೃದ್ಧಿಗೆ ನಮ್ಮೊಂದಿಗೆ ಹಲವಾರು ವಿಚಾರಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದುದು ಇನ್ನೂ ನಮ್ಮ ಕಣ್ಮುಂದೆ ಹಸಿರಾಗಿದೆ ಎಂದು ಅವರ ಒಡನಾಟವನ್ನು ನೆನಪಿಸಿಕೊಂಡರು.
ಅವರ ಅಗಲಿಕೆ ನಿಜಕ್ಕೂ ನಮಗೂ ಅಪಾರ ವೀರಶೈವ ಸಮುದಾಯದವರಿಗೂ ಮತ್ತು ಅವರ ರಾಜಕೀಯ ಅಭಿಮಾನಿಗಳಿಗೆ ದುಃಖವನ್ನು ತಂದಿದೆ. ಶ್ರೀ ಜಗದ್ಗುರು ಕೊಟ್ಟೂರೇಶ್ವರರು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಬಸವಲಿಂಗ ಮಹಾಸ್ವಾಮಿಗಳು ಪತ್ರಿಕಾ ಪ್ರಕಾಟಣೆಯಲ್ಲಿ ತಿಳಿಸಿದ್ದಾರೆ.